ಅನಿವಾಸಿ ಕನ್ನಡಿಗರ ಸಚಿವಾಲಯ ಸ್ಥಾಪನೆಗೆ ನಿರ್ಧಾರ; ಸೌದಿ ಕನ್ನಡಿಗರಿಂದ ಸ್ವಾಗತ
ರಿಯಾದ್, ಜೂ. 7: ಕರ್ನಾಟಕ ಸರ್ಕಾರವು ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ (ಸೆಕ್ರಟರಿಯೇಟ್) ವನ್ನು ಸ್ಥಾಪಿಸಿರುವ ನಿರ್ಧಾರವನ್ನು ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆ–ಸೌದಿ ಅರೇಬಿಯಾ ಸ್ವಾಗತಿಸಿದೆ.
ಈ ಕುರಿತು ಪ್ರಕಟನೆ ನೀಡಿರುವ ವೇದಿಕೆಯ ಅಧ್ಯಕ್ಷ ಝಕರಿಯಾ ಜೋಕಟ್ಟೆ, ಈ ನಿರ್ಧಾರವು ವಿಶ್ವಾದ್ಯಂತ ನೆಲೆಸಿರುವ ಕನ್ನಡಿಗರ ಹಲವು ವರ್ಷಗಳ ಕನಸು ಹಾಗೂ ನಿರಂತರ ಪ್ರಯತ್ನಗಳಿಗೆ ದೊರೆತ ಮನ್ನಣೆಯಾಗಿದೆ ಎಂದು ಹೇಳಿದ್ದಾರೆ.
ಅನಿವಾಸಿ ಕನ್ನಡಿಗರ ಸಮಸ್ಯೆಗಳು, ಅಗತ್ಯಗಳು ಮತ್ತು ನಿರೀಕ್ಷೆಗಳನ್ನು ಪರಿಗಣಿಸಲು ಪ್ರತ್ಯೇಕ ಸಚಿವಾಲಯದ ಅಗತ್ಯವನ್ನು ವೇದಿಕೆ ಹಲವು ವರ್ಷಗಳಿಂದ ಪ್ರತಿಪಾದಿಸುತ್ತ ಬಂದಿತ್ತು. ಸಚಿವಾಲಯದ ಸ್ಥಾಪನೆಯು ಕರ್ನಾಟಕ ಮತ್ತು ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
2018ರಲ್ಲಿ ಡಾ. ಆರತಿ ಕೃಷ್ಣ ಅವರು ಸೌದಿ ಅರೇಬಿಯಾದ ದಮ್ಮಾಮ್ ಗೆ ಭೇಟಿ ನೀಡಿದ ಬಳಿಕ ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆ–ಸೌದಿ ಅರೇಬಿಯಾ ಪ್ರತ್ಯೇಕ ಎನ್ಆರ್ಐ ಕಾರ್ಯಾಲಯ ಅಥವಾ ಸಚಿವಾಲಯ ಸ್ಥಾಪನೆಗಾಗಿ ನಿರಂತರವಾಗಿ ಒತ್ತಾಯಿಸುತ್ತಾ ಬಂದಿತ್ತು. ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಹಲವು ಹಂತಗಳಲ್ಲಿ ಚರ್ಚೆಗಳು ಹಾಗೂ ಮನವಿ ಕಾರ್ಯಗಳು ನಡೆದಿದ್ದವು ಎಂದು ಝಕರಿಯಾ ಜೋಕಟ್ಟೆ ಹೇಳಿದ್ದಾರೆ.
ಫೆಬ್ರವರಿ 2024ರಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ 30ಕ್ಕೂ ಹೆಚ್ಚು ರಾಷ್ಟ್ರಗಳನ್ನು ಪ್ರತಿನಿಧಿಸಿದ್ದ ಬಹುರಾಷ್ಟ್ರೀಯ ಕನ್ನಡಿಗರ ನಿಯೋಗ ಮುಖ್ಯಮಂತ್ರಿಯವರಿಗೆ ಮನವಿಪತ್ರ ಸಲ್ಲಿಸಿ, ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಾಂಸ್ಥಿಕ ವ್ಯವಸ್ಥೆ ರೂಪಿಸುವಂತೆ ಒತ್ತಾಯಿಸಿತ್ತು. ಡಿಸೆಂಬರ್ 2025ರಲ್ಲಿ ಬೆಳಗಾವಿಯಲ್ಲಿ ನಡೆದ ಸಭೆಯಲ್ಲೂ 35ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಈ ಬೇಡಿಕೆಯನ್ನು ಪುನರುಚ್ಚರಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಸಚಿವಾಲಯದ ಸ್ಥಾಪನೆಗಾಗಿ ನಡೆದ ಪ್ರಯತ್ನಗಳಲ್ಲಿ ವೇದಿಕೆಯ ಪದಾಧಿಕಾರಿಗಳಾದ ಫಿರೋಝ್ ಕಲ್ಲಡ್ಕ, ಸತೀಶ್ ಬಜಾಲ್, ಕೆ.ಎಚ್.ರಫೀಕ್ ಸೂರಿಂಜೆ, ಅಯಾಝ್ ಕೈಕಂಬ, ಸಂತೋಷ್ ಶೆಟ್ಟಿ ನೇತೃತ್ವದ ರಿಯಾದ್ ತಂಡ ಹಾಗೂ ಡಾ. ಅಬ್ದುಲ್ ಶಕೀಲ್ ನೇತೃತ್ವದ ಜಿದ್ದಾ ತಂಡ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಶೇಖ್ ಕರ್ನಿರೆ, ಕಮರುದ್ದೀನ್ ಗೂಡಿನಬಳಿ, ಶರೀಫ್ ಜೋಕಟ್ಟೆ, ಆರಿಫ್ ಜೋಕಟ್ಟೆ, ಶಾಹುಲ್ ಹಮೀದ್, ಫಾರೂಕ್ ಮುಲ್ಕಿ, ಇಸ್ಮಾಯೀಲ್ ಉಳ್ಳಾಲ್ ರಿಯಲ್ ಟೆಕ್ ಹಾಗೂ ಸಾಜಿದ್ ವಳವೂರ್ ಸೇರಿದಂತೆ ಹಲವಾರು ಸಮುದಾಯ ಮುಖಂಡರು ಬೆಂಬಲ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.
ಡಾ. ಆರತಿ ಕೃಷ್ಣರ ನಿರಂತರ ಪ್ರಯತ್ನಗಳು ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಿಂದ ಈ ಬೇಡಿಕೆಗೆ ಸ್ಪಂದನ ದೊರೆತಿದೆ ಎಂದು ಝಕರಿಯಾ ಜೋಕಟ್ಟೆ ಹೇಳಿದ್ದಾರೆ.
ಸಚಿವಾಲಯವು ಅನಿವಾಸಿ ಕನ್ನಡಿಗರು ಮತ್ತು ಕರ್ನಾಟಕ ಸರಕಾರದ ನಡುವಿನ ಪರಿಣಾಮಕಾರಿ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಸಮಸ್ಯೆಗಳ ಪರಿಹಾರ, ಕಲ್ಯಾಣ ಕಾರ್ಯಕ್ರಮಗಳು, ಹೂಡಿಕೆ, ಉದ್ಯಮ ಮತ್ತು ಸಾಂಸ್ಕೃತಿಕ ಸಂಪರ್ಕ ವೃದ್ಧಿಗೆ ಇದು ನೆರವಾಗಲಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.
ಹೊಸದಾಗಿ ಸ್ಥಾಪಿಸಲಾದ ಸಚಿವಾಲಯದೊಂದಿಗೆ ಸಕ್ರಿಯವಾಗಿ ಕೈಜೋಡಿಸಿ ಕಾರ್ಯನಿರ್ವಹಿಸಲು ಸಿದ್ಧವಿರುವುದಾಗಿ ತಿಳಿಸಿರುವ ವೇದಿಕೆ, ಜಾಗತಿಕ ಕನ್ನಡಿಗ ಸಮುದಾಯ ಮತ್ತು ಕರ್ನಾಟಕದ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.