Afzalpur | ಶಾಸಕ ಎಂ.ವೈ.ಪಾಟೀಲ್ ವಿರುದ್ಧದ ಆರೋಪಕ್ಕೆ ಬ್ಲಾಕ್ ಕಾಂಗ್ರೆಸ್ ಖಂಡನೆ
ಅಫಜಲಪುರ: ಶಾಸಕ ಎಂ.ವೈ. ಪಾಟೀಲ್ ಅವರು ಭ್ರಷ್ಟರು ಎಂದು ಆರೋಪಿಸಿರುವ ಜೆಡಿಎಸ್ ಮುಖಂಡ ಶಿವಕುಮಾರ ನಾಟೀಕಾರ ಅವರ ಹೇಳಿಕೆಯನ್ನು ಅಫಜಲಪುರ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ, ವಿರೋಧ ಪಕ್ಷದ ಸ್ಥಾನದಲ್ಲಿರುವವರು ತಾಲೂಕು ಹಾಗೂ ಕ್ಷೇತ್ರದ ಅಭಿವೃದ್ಧಿ ಕುರಿತು ಟೀಕೆ ಮಾಡಲಿ. ಆದರೆ ವೈಯಕ್ತಿಕವಾಗಿ ಶಾಸಕರನ್ನು ಭ್ರಷ್ಟರು ಎಂದು ಆರೋಪಿಸಿ ನಿಂದಿಸುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಹೇಳಿದರು.
ಶಾಸಕರ ವಿರುದ್ಧ ಮಾಡಿರುವ ಆರೋಪಗಳಿಗೆ ಯಾವುದೇ ಆಧಾರವಿದ್ದರೆ ದಾಖಲೆಗಳೊಂದಿಗೆ ಬಹಿರಂಗಪಡಿಸಲಿ. ಇಲ್ಲದಿದ್ದರೆ ವೈಯಕ್ತಿಕ ಟೀಕೆಗಳನ್ನು ನಿಲ್ಲಿಸಿ, ಜನರ ಸಮಸ್ಯೆಗಳು ಹಾಗೂ ತಾಲೂಕಿನ ಅಭಿವೃದ್ಧಿ ಕುರಿತು ಧ್ವನಿ ಎತ್ತಲಿ ಎಂದು ಅವರು ಹೇಳಿದರು.
ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ ಮಾತನಾಡಿ, ರಾಜ್ಯದ 224 ಶಾಸಕರೂ ನಮ್ಮ ಶಾಸಕ ಎಂ.ವೈ. ಪಾಟೀಲ ಅವರನ್ನು ಗೌರವದಿಂದ ಕಾಣುತ್ತಾರೆ. ರಾಜಕೀಯದಲ್ಲಿ ಟೀಕೆ, ಟಿಪ್ಪಣಿ ಸಹಜ. ಆದರೆ ಇನ್ನೊಬ್ಬರ ಮೇಲೆ ಆರೋಪ ಮಾಡುವ ಮುನ್ನ ತಮ್ಮ ರಾಜಕೀಯ ಹಾಗೂ ಸಾರ್ವಜನಿಕ ಜೀವನ ಎಷ್ಟು ಸ್ವಚ್ಛವಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶಿವಕುಮಾರ ನಾಟೀಕಾರ ಅವರಿಗೆ ತಿರುಗೇಟು ನೀಡಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ ಮಾತನಾಡಿ, ನಾವು ಶಾಸಕ ಎಂ.ವೈ. ಪಾಟೀಲ ಅವರ ಕಟ್ಟಾ ಅನುಯಾಯಿಗಳೇ ಹೊರತು ಯಾರ ಗುಲಾಮರೂ ಅಲ್ಲ ಎಂಬುದನ್ನು ನಾಟೀಕಾರ ಅವರು ಅರ್ಥಮಾಡಿಕೊಳ್ಳಬೇಕು. ಅವರು ಕೂಡ ಜೆಡಿಎಸ್ನ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಯಾರಿಗೆ ನಿಷ್ಠರಾಗಿದ್ದರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದಾರ್ಥ ಬಸರಿಗಿಡ ಮಾತನಾಡಿ, ನಾಯಕರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದರೆ ತಾವು ದೊಡ್ಡವರಾಗುತ್ತೇವೆ ಎಂಬ ಭ್ರಮೆಯಿಂದ ಶಿವಕುಮಾರ ನಾಟೀಕಾರ ಹೊರಬರಬೇಕು. ವಿರೋಧ ಪಕ್ಷದ ಸ್ಥಾನದಲ್ಲಿರುವವರು ಆಡಳಿತ ಪಕ್ಷದ ವಿರುದ್ಧ ಅಭಿವೃದ್ಧಿ ವಿಚಾರಗಳಲ್ಲಿ ಧ್ವನಿ ಎತ್ತಿದರೆ ಜನರು ಮೆಚ್ಚುತ್ತಾರೆ. ಆದರೆ ವೈಯಕ್ತಿಕ ಆರೋಪ ಹಾಗೂ ಟೀಕೆಗಳಲ್ಲೇ ಕಾಲಹರಣ ಮಾಡಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ತಾಲೂಕಿನ ಪ್ರಜ್ಞಾವಂತ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಗಾಡಿಸಾಹುಕಾರ, ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ದತ್ತು ಬಂಡಗಾರ, ಅಫಜಲಪುರ ಮತ್ತು ದೇವಲಗಾಣಗಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಕರಜಗಿ, ಮುಖಂಡರಾದ ಸಿದ್ದು ಮಗಿ, ಶ್ರೀಶೈಲ ಪಾಟೀಲ, ಸಂತೋಷ ಮಣಮಿ, ವಿಶ್ವನಾಥ ಮಲಘಾಣ, ಮಲ್ಲಿಕಾರ್ಜುನ ವಾಳಿ, ಶರಣು ಈಶ್ವರಗೊಂಡ ಹಾಗೂ ಆನಂದ ರಾಠೋಡ ಉಪಸ್ಥಿತರಿದ್ದರು.