Afzalpur | ಬರ ಘೋಷಣೆ, ಭೀಮಾ ನದಿಗೆ ನೀರು ಹರಿಸಲು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭ
ಅಫಜಲಪುರ : ಕಲಬುರಗಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಅಫಜಲಪುರ ತಾಲೂಕಿನ ಭೀಮಾ ನದಿಗೆ ನಾರಾಯಣಪುರ ಹಾಗೂ ಉಜನಿ ಜಲಾಶಯಗಳಿಂದ ನೀರು ಹರಿಸಬೇಕು ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ತಾಲೂಕು ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಬುಧವಾರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
ಧರಣಿಯಲ್ಲಿ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಳು ಒಣಗುವ ಹಂತ ತಲುಪಿವೆ. ಹೀಗಾಗಿ ಯಾವುದೇ ವಿಳಂಬವಿಲ್ಲದೆ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಭೀಮಾ ನದಿಗೆ ನಾರಾಯಣಪುರ ಹಾಗೂ ಉಜನಿ ಜಲಾಶಯಗಳಿಂದ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಲು ವಿಶೇಷ ಕ್ರಮ ಕೈಗೊಳ್ಳುವುದು ಸೇರಿದಂತೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳು ಈಡೇರುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಹೋರಾಟದ ಮುಖಂಡರು ಎಚ್ಚರಿಕೆ ನೀಡಿದರು.
ಧರಣಿ ಸತ್ಯಾಗ್ರಹದಲ್ಲಿ ಮುಖಂಡರಾದ ಶ್ರೀಮಂತ ಬಿರಾದಾರ, ರಮೇಶ ಪಾಟೀಲ, ರಮೇಶ ಶೆಟ್ಟಿ, ಶಂಕರ ಮ್ಯಾಕೇರಿ, ಅಣ್ಣರಾವ ಪಾಟೀಲ, ಲತೀಫ್ ಪಟೇಲ್, ವಕೀಲರ ಸಂಘದ ಅಧ್ಯಕ್ಷ ಅರ್ಜುನ ಕೆರೂರ, ಕೆ.ಜಿ. ಪೂಜಾರಿ, ಗುರು ಚಾಂದಕವಟೆ, ಶಾಂತು ಅಂಜುಟಗಿ, ಪ್ರಭಾವತಿ ಮೇತ್ರಿ, ಬಸವರಾಜ ಶೀರ್, ನಿಂಗನಗೌಡ ಪಾಟೀಲ, ಯಶವಂತ ಪಟ್ಟೇದಾರ, ಅರ್ಜುನ ಸೋಮಜಾಳ, ರಫತ್ ಜಾಗೀರದಾರ, ತುಕಾರಾಮ ಶಿಂಧೆ, ಈರಣ್ಣ ತೇಲಿ, ಸಂಜೀವ ಶಿವೂರ, ಮಲ್ಲಪ್ಪ ಆಲೂರ, ಶಿವಪ್ರಸಾದ್ ನೂಲ, ಸಿದ್ದಪ್ಪ ಗುಡೇದ್, ಬಸಯ್ಯ ಆಕಾಶಮಠ, ಸಿದ್ದು ದೆವರನಾವದಗಿ ಸೇರಿದಂತೆ ಅನೇಕ ರೈತರು, ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.