Afzalpur | ವೈಜ್ಞಾನಿಕ ಮನೋವೃತ್ತಿ ಮೂಢನಂಬಿಕೆ ದೂರ ಮಾಡಿ ಮಾನಸಿಕ ಆರೋಗ್ಯ ಕಾಪಾಡುತ್ತದೆ : ಪ್ರೊ.ಶ್ರೀಶೈಲ ಘೂಳಿ
ಅಫಜಲಪುರ: ವೈಜ್ಞಾನಿಕ ಮನೋವೃತ್ತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಚಿಂತನೆಯು ಮೂಢನಂಬಿಕೆಗಳನ್ನು ದೂರ ಮಾಡಿ, ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಚಿಂತಕ ಪ್ರೊ. ಶ್ರೀಶೈಲ ಘೂಳಿ ಹೇಳಿದರು.
ಪಟ್ಟಣದ ಶ್ರೀಮತಿ ಮಹಾಂತಮ್ಮ ಪಾಟೀಲ ಪಿಯು ಕಾಲೇಜಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಅಫಜಲಪುರ ಘಟಕದ ವತಿಯಿಂದ ಆಯೋಜಿಸಿದ್ದ ತಾಲೂಕು ಸಮಾವೇಶ ಹಾಗೂ “ವೈಜ್ಞಾನಿಕ ಮನೋವೃತ್ತಿ ಮತ್ತು ಮಾನಸಿಕ ಆರೋಗ್ಯ” ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈಜ್ಞಾನಿಕ ಮನೋಭಾವನೆ ಎಂದರೆ ವೈಜ್ಞಾನಿಕವಾಗಿ ಸಾಬೀತಾಗಿರುವ ವಿಚಾರಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ. ಮೂಢನಂಬಿಕೆ, ಅಂಧಶ್ರದ್ಧೆ ಹಾಗೂ ಅವೈಜ್ಞಾನಿಕ ಆಚರಣೆಗಳಿಂದ ದೂರವಿದ್ದು, ತರ್ಕಬದ್ಧವಾಗಿ ಆಲೋಚಿಸುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಮನೋವೃತ್ತಿಯು ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವುದರ ಜೊತೆಗೆ ಆರೋಗ್ಯಕರ ಹಾಗೂ ಪ್ರಗತಿಪರ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಎಸ್.ಎಂ.ವಿ.ವಿ.ಎಸ್. ಕೋಶಾಧಿಕಾರಿ ಸದಾಶಿವ ಮೇತ್ರಿ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಜ್ಞಾನ ವಿಜ್ಞಾನ ಸಮಿತಿ ಕಲಬುರಗಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಮುಳೆಗಾಂವ ಮಾತನಾಡಿ, ದೇವರು ಅಥವಾ ಧರ್ಮದ ವಿರುದ್ಧ ಕಾರ್ಯನಿರ್ವಹಿಸುವುದು ಸಮಿತಿಯ ಉದ್ದೇಶವಲ್ಲ. ದೇವರ ಹೆಸರಿನಲ್ಲಿ ನಡೆಯುವ ಅನಾಚಾರ, ಅಂಧಶ್ರದ್ಧೆ ಹಾಗೂ ಮೂಢನಂಬಿಕೆಗಳನ್ನು ತಡೆಗಟ್ಟುವುದು ಸಮಿತಿಯ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಗತಿಪರ ರೈತ ಹೋರಾಟಗಾರ ಶ್ರೀಮಂತ ಬಿರಾದಾರ, ಭಾರತ ಜ್ಞಾನ ವಿಜ್ಞಾನ ಸಮಿತಿಯು ಹಲವು ವರ್ಷಗಳಿಂದ ಸಮಾಜದಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕ ಹಾಗೂ ಪರೀಕ್ಷೆಗೆ ಸೀಮಿತರಾಗದೆ, ವ್ಯಕ್ತಿತ್ವ ವಿಕಸನದತ್ತಲೂ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಶ್ರೀಮತಿ ಮಹಾಂತಮ್ಮ ಪಾಟೀಲ ಪಿಯು ಕಾಲೇಜಿನ ಪ್ರಾಂಶುಪಾಲ ಎಂ. ವೀರನಗೌಡ ಗೌರವ ಉಪಸ್ಥಿತರಿದ್ದರು. ರೈತ ಮುಖಂಡ ಗುರು ಚಾಂದಕವಟೆ ಮಾತನಾಡಿದರು.
ಶಿಕ್ಷಕಿ ಗಿರಿಜಾ ಹಂಗರಗಿ ಸ್ವಾಗತಿಸಿದರು. ಶಿಕ್ಷಕ ಲಕ್ಷ್ಮಣ ನಡುವಿನಕೇರಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನಾಮದೇವ ಕಡಕೋಳ, ಶ್ರೀಮಂತ ಬಿರಾದಾರ, ಅಬ್ಬಾಸಲಿ ನದಾಫ್, ರವಿಚಂದ್ರ ಅತನೂರ, ಪೀರಸಾಹೇಬ್ ಕಲಾಲ, ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.