Aland | ಸಾಮಾಜಿಕ ಪರಿವರ್ತನೆಗೆ ಶಿಕ್ಷಕರ ಪಾತ್ರ ಮಹತ್ವದ್ದು: ಸುಭಾಷ್ ಗುತ್ತೇದಾರ
ನಿವೃತ್ತ ಶಿಕ್ಷಕಿ ನೀಲಾವತಿ ಪಾಟೀಲರಿಗೆ ಅಭಿನಂದನೆ, ‘ಹೃದಯಾಂತರಾಳದ ಮಾತುಗಳು’ ಕೃತಿ ಲೋಕಾರ್ಪಣೆ
ಆಳಂದ, ಜು.14: ಸಾಮಾಜಿಕ ಸ್ವಾಸ್ಥ್ಯ ಹಾಗೂ ಪರಿವರ್ತನೆಗೆ ಶಿಕ್ಷಕರಿಂದಲೇ ಸಾಧ್ಯ ಎಂದು ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಹೇಳಿದರು.
ತಾಲೂಕಿನ ಭೂಸನೂರ ಗ್ರಾಮದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನೀಲಾವತಿ ಬಿ. ಪಾಟೀಲ ಅವರ ಅಭಿನಂದನಾ ಸಮಾರಂಭ ಹಾಗೂ ‘ಹೃದಯಾಂತರಾಳದ ಮಾತುಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಬಗ್ಗೆ ಕಾಳಜಿ ಹೊಂದಿರುವವರಿಂದ ಮಾತ್ರ ನಿಜವಾದ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ನೀಲಾವತಿ ಪಾಟೀಲ ಅವರು ಮೂರು ದಶಕಗಳ ಕಾಲ ಶಿಕ್ಷಣ ಕ್ಷೇತ್ರದ ಜೊತೆಗೆ ಸಾಮಾಜಿಕ, ಧಾರ್ಮಿಕ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ. ಅವರ ಆದರ್ಶ ವ್ಯಕ್ತಿತ್ವ, ಸಮಾಜಮುಖಿ ಚಿಂತನೆ ಮತ್ತು ದಾಸೋಹ ಮನೋಭಾವವು ಅವರನ್ನು ಆದರ್ಶ ಶಿಕ್ಷಕಿಯನ್ನಾಗಿ ರೂಪಿಸಿದೆ ಎಂದು ಶ್ಲಾಘಿಸಿದರು.
ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ, ಸಮಾಜಕ್ಕೆ ಉತ್ತಮ ನಾಗರಿಕರನ್ನು ರೂಪಿಸುವ ಶಿಲ್ಪಿಗಳಾಗಿದ್ದು, ಅವರ ಸೇವೆ ಸಮಾಜದ ಅಭಿವೃದ್ಧಿಗೆ ಪ್ರಮುಖ ಕೊಡುಗೆಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹೃದಯಾಂತರಾಳದ ಮಾತುಗಳು ಕೃತಿಯನ್ನು ಚೌಡಾಪೂರದ ಶ್ರೀ ವೀರ ಮಹಾಂತೇಶ್ವರ ಶಿವಾಚಾರ್ಯರು ಜನಾರ್ಪಣೆಗೊಳಿಸಿ, ಬಹುಮುಖ ವ್ಯಕ್ತಿತ್ವದ ನೀಲಾವತಿ ಪಾಟೀಲ ಅವರ ಶಿಕ್ಷಕ ವೃತಿ ಜೀವನ ತುಂಬಾ ಅಪರೂಪವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಶೀ ಶ್ರೀಕಂಠ ಶಿವಾಚಾರ್ಯರು, ಶ್ರೀ ಬಸವಲಿಂಗ ಶಿವಾಚಾರ್ಯರು, ಸಾಹಿತಿ ಧರ್ಮಣ್ಣ ಎಚ್ ಧನ್ನಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಕರ್ನಾಟಕ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ರೇಣುಕಾ ಡಾಂಗೆ, ಸಾವಿತ್ರಿಬಾಯಿ ಫುಲೆ ಶಿಕ್ಷಕಿರಿಯರ ಸಂಘಧ್ಯಕ್ಷೆ ಶೈಲಜಾ ಪೋಮಾಜಿ, ಮುಖಂಡರಾದ ಬಾಬುರಾವ ಪಾಟೀಲ, ರಾಜಶೇಖರ ಪಾಟೀಲ, ನರಸಪ್ಪ ಬಿರಾದಾರ, ರೇವಣಸಿದ್ದಪ್ಪ ಪಟ್ನೆ, ರಾಜಶೇಖರ ಯಂಕoಚಿ ಸೇರಿದಂತೆ ಅನೇಕ ಗಣ್ಯರು, ಕಲಾವಿದರು ಭಾಗವಹಿಸಿದರು.
ನಂತರ ಶಿಕ್ಷಕಿ ನೀಲಾವತಿ ಬಿ ಪಾಟೀಲ ಅವರಿಗೆ ಶಿಕ್ಷಣ ಇಲಾಖೆ ಹಾಗೂ ಭೂಸನೂರ ಗ್ರಾಮಸ್ಥರಿಂದ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಿದರು.