Kalaburagi | ಕೆಬಿಎನ್ ವಿವಿಯಲ್ಲಿ ಬಿ.ಎಡ್ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ
ಶಿಸ್ತು, ಪರಿಶ್ರಮ ಮತ್ತು ನಿರಂತರ ಕಲಿಕೆಯೇ ಯಶಸ್ಸಿನ ಗುಟ್ಟು: ಡಾ. ನಿಶಾತ್ ಆರಿಫ್ ಹುಸ್ಸೇನಿ
ಕಲಬುರಗಿ : ಕೆಬಿಎನ್ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದಲ್ಲಿ ನೂತನವಾಗಿ ಪ್ರವೇಶ ಪಡೆದ ಬಿ.ಎಡ್ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾಷಾ ನಿಕಾಯದ ಡೀನ್ ಡಾ. ನಿಶಾತ್ ಆರಿಫ್ ಹುಸ್ಸೇನಿ, ಖಾಜಾ ಶಿಕ್ಷಣ ಸಂಸ್ಥೆಯ ಶಿಕ್ಷಣ ಪರಂಪರೆ ಹಾಗೂ ಕೆಬಿಎನ್ ವಿಶ್ವವಿದ್ಯಾಲಯದ ಶೈಕ್ಷಣಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ಶಿಸ್ತು ಹಾಗೂ ನಿರಂತರ ಕಲಿಕೆಯ ಮನೋಭಾವ ಅಗತ್ಯವೆಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಾಣಿಜ್ಯ ನಿಕಾಯದ ಡೀನ್ ಡಾ. ಶ್ರೀನಿವಾಸ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಅಧ್ಯಯನ ನಡೆಸಿದರೆ ಉತ್ತಮ ಶಿಕ್ಷಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಶಿಕ್ಷಣ ನಿಕಾಯದ ಡೀನ್ ಡಾ. ಇಕ್ಬಾಲ್ ಮಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ, ಓರಿಯಂಟೇಶನ್ ಕಾರ್ಯಕ್ರಮದ ಉದ್ದೇಶ ಹಾಗೂ ಬಿ.ಎಡ್ ಶಿಕ್ಷಣದ ಮಹತ್ವವನ್ನು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕ್ಯಾಲಿಕಟ್ ವಿಶ್ವವಿದ್ಯಾಲಯದ ಡಾ. ಅಬ್ದುಲ್ ಗಫೂರ್ ಹಾಗೂ ರಿಷಿಹುಡ್ ವಿಶ್ವವಿದ್ಯಾಲಯದ ಪ್ರೊ. ರೇವಾ ಪರಿಮೋ ಭಾಗವಹಿಸಿ, ಪರಿಣಾಮಕಾರಿ ಬೋಧನಾ ವಿಧಾನಗಳು, ಶಿಕ್ಷಕರ ವೃತ್ತಿಪರ ಹೊಣೆಗಾರಿಕೆ ಹಾಗೂ ಆಧುನಿಕ ಶಿಕ್ಷಣದ ಸವಾಲುಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಅಜರಾ ಅಂಜು ಮತ್ತು ಸನಾ ಅಮ್ರೀನ್ ಪ್ರಾರ್ಥಿಸಿದರು. ಸಯ್ಯದಾ ಆಯೇಷಾ ಮುಸ್ಕಾನ್ ಸ್ವಾಗತಿಸಿದರು. ಸೈಯದ್ ಆಯೇಷಾ ರೂಹಿ ಹಾಗೂ ಮುಸ್ಕಾನ್ ಕಾರ್ಯಕ್ರಮ ನಿರೂಪಿಸಿದರು. ಡಾ.ಸಾಲಿಹಾ ಖಾತೂನ್ ಮತ್ತು ಡಾ. ಕುದ್ರತ್ ಉನ್ನಿಸಾ ಶೇಖ್ ವಂದಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ವಡ್ಡನಕೇರಿ, ರಿಯಾಜ್ ಪಠಾಣ್, ಮೆಹಬೂಬ್ ಸಿ., ಫಾತಿಮಾ ಬೇಗಂ, ರಝಿಯಾ ಪರ್ವೀನ್ ಸೇರಿದಂತೆ ಶಿಕ್ಷಣ ನಿಕಾಯದ ಅಧ್ಯಾಪಕರು ಹಾಗೂ ಬಿ.ಎಡ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.