ಚಿತ್ತಾಪುರದಲ್ಲಿ ಶಾಂತಿಯುತ, ಸೌಹಾರ್ದಯುತ ಗಣೇಶೋತ್ಸವ ಆಚರಿಸಿ : ಡಿವೈಎಸ್ಪಿ ಶಂಕರಗೌಡ ಪಾಟೀಲ್
ಚಿತ್ತಾಪುರ: ಪ್ರತಿವರ್ಷದಂತೆ ಈ ವರ್ಷವೂ ಗಣೇಶ ಹಬ್ಬವನ್ನು ಶಾಂತಿಯುತವಾಗಿ, ಸಡಗರ-ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ್ ಕರೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿತ್ತಾಪುರದಲ್ಲಿ ಎಲ್ಲ ಜಾತಿ-ಧರ್ಮದ ಜನರು ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುವ ಪರಂಪರೆ ಇದೆ. ಕಳೆದ 12 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದು, ಯಾವುದೇ ಅಹಿತಕರ ಘಟನೆ ಕಂಡಿಲ್ಲ. ಅದಕ್ಕಾಗಿಯೇ ಚಿತ್ತಾಪುರ ಶಾಂತಿ ಪ್ರಿಯ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ಗಣೇಶ ಮಂಡಳಿಗಳು ಕನಿಷ್ಠ ಐದು ಸ್ವಯಂಸೇವಕರನ್ನು ನೇಮಿಸಬೇಕು. ಸುರಕ್ಷತೆಗೆ ಆದ್ಯತೆ ನೀಡಬೇಕು. ಗಣೇಶ ಭಾವಚಿತ್ರವಿರುವ ಬ್ಯಾನರ್ಗಳಲ್ಲಿ ಸಭ್ಯತೆ ಕಾಪಾಡಬೇಕು ಹಾಗೂ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರತಿಷ್ಠಾಪನೆ ಮಾಡುವ ಸ್ಥಳ, ದಿನಗಳ ಸಂಖ್ಯೆ ಹಾಗೂ ವಿಸರ್ಜನೆ ಮೆರವಣಿಗೆಯ ಮಾರ್ಗದ ಸಂಪೂರ್ಣ ಮಾಹಿತಿಯನ್ನು ಮುಂಚಿತವಾಗಿ ಪೊಲೀಸ್ ಇಲಾಖೆಗೆ ನೀಡಿದರೆ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಪಿಎಸ್ಐ ಮಂಜುನಾಥ ರೆಡ್ಡಿ ಮಾತನಾಡಿ, ಗಣೇಶ ಪ್ರತಿಷ್ಠಾಪನೆಗೆ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ರಸ್ತೆ ಬದಿಯಲ್ಲಿ ದೊಡ್ಡ ಪೆಂಡಾಲ್ಗಳನ್ನು ನಿರ್ಮಿಸಬಾರದು. ಈ ಬಾರಿಯೂ ದೊಡ್ಡ ಮಟ್ಟದ ಡಿಜೆಗಳಿಗೆ ಅವಕಾಶ ಇಲ್ಲ. ಟ್ರ್ಯಾಕ್ಟರ್, ಲಾರಿ ಅಥವಾ ಟೆಂಪೋಗಳಲ್ಲಿ ಭಾರಿ ಡಿಜೆಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಸಣ್ಣ ಮಟ್ಟದ ಧ್ವನಿ ವ್ಯವಸ್ಥೆ ಬಳಸಿಕೊಂಡು ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಗಣೇಶ ವಿಸರ್ಜನೆ ವೇಳೆ ಒಂದು ಟಾಪ್ ಹಾಗೂ ಒಂದು ಬೇಸ್ ಡಿಜೆ ಬಳಸಲು ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಮುಖಂಡ ಜಗದೀಶ ಚವ್ಹಾಣ ಮಾತನಾಡಿ, ಚಿತ್ತಾಪುರದಲ್ಲಿ ಎಲ್ಲ ಸಮಾಜದವರು ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುತ್ತಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಹಣಮಂತ ಸಂಕನೂರ, ಬಾಬು ಕಾಶಿ, ಅಂಬರೀಶ್ ಸುಲೇಗಾಂವ ಮಾತನಾಡಿದರು.
ಈ ಸಂದರ್ಭದಲ್ಲಿ ಅಗ್ನಿ ಶಾಮಕ ದಳದ ಸಿಪಿಐ ನಾಗರಾಜ, ಎಂ.ಎ ರಶೀದ್, ಖಾಸೀಂ ಎ.ಟು.ಜಡ್, ಸಾಬಣ್ಣ ಕಾಶಿ, ಕೋಟೇಶ್ವರ ರೇಶ್ಮಿ, ನಾಗರಾಜ ರೇಶ್ಮಿ, ಆನಂದ ಯರಗಲ್, ದೇವು ಯಾಬಾಳ, ಲಕ್ಷ್ಮೀಕಾಂತ ತಾಂಡೂರಕರ್, ಸಚೀನ್, ಅಲ್ತಾಫ್, ಸೂರಜ್ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ಮಹೇಶ ರೂಮಾಲ್ ನಿರೂಪಿಸಿ, ವಂದಿಸಿದರು.
ಗಣೇಶ ವಿಸರ್ಜನೆ ಸ್ಥಳ ಬದಲಾವಣೆ :
ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮಾಹಿತಿ ನೀಡಿ, ಪ್ರತಿವರ್ಷ ದೇಶಮುಖ ಅವರ ಬಾವಿಯಲ್ಲಿ ಗಣೇಶ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ ಆ ಬಾವಿ ಸಂಪೂರ್ಣ ಮುಚ್ಚಿರುವುದರಿಂದ ಈ ಬಾರಿ ಮಳಖೇಡ್ ರಸ್ತೆಯಲ್ಲಿರುವ ಸೇಂದಿ ಡಿಪೋ ಬಾವಿಯಲ್ಲಿ ವಿಸರ್ಜನೆ ನಡೆಸಲು ಯೋಜಿಸಲಾಗಿದೆ. ಇದರಿಂದ ವಿಸರ್ಜನೆ ಮೆರವಣಿಗೆಯ ಮಾರ್ಗದಲ್ಲಿ ಸ್ವಲ್ಪ ಬದಲಾವಣೆ ಆಗಲಿದೆ ಎಂದು ತಿಳಿಸಿದರು.