ಕಲಬುರಗಿ: ಶಿಕ್ಷಕ ಎಂದರೆ ಕೇವಲ ಪಾಠ ಹೇಳುವ ಗುರುವಲ್ಲ, ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಶಿಲ್ಪಿ ಎಂದು ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ ಹೇಳಿದರು.

ನಗರದ ಗೋದುತಾಯಿ ಶಿಕ್ಷಣ (ಬಿ.ಎಡ್.) ಮಹಾವಿದ್ಯಾಲಯದಲ್ಲಿ ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿಯರು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಸಂಸ್ಕಾರ, ನೈತಿಕತೆ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಮಹತ್ವದ ಹೊಣೆಗಾರಿಕೆ ಹೊಂದಿದ್ದಾರೆ ಎಂದರು.

ವೇದಕಾಲದ ಶಿಕ್ಷಣ ಪದ್ಧತಿ ಮತ್ತು ಇಂದಿನ ಶಿಕ್ಷಣ ವ್ಯವಸ್ಥೆಯ ನಡುವಿನ ವ್ಯತ್ಯಾಸಗಳನ್ನು ವಿವರಿಸಿದ ಅವರು, ಕಾಲ ಬದಲಾದರೂ ಶಿಕ್ಷಣದ ಮೂಲ ಉದ್ದೇಶ ವ್ಯಕ್ತಿತ್ವ ನಿರ್ಮಾಣವೇ ಆಗಿದೆ ಎಂದು ಹೇಳಿದರು. ಡಾ.ಅಪ್ಪ ಅವರು ಶಿಕ್ಷಕರಿಗೆ ಮಹಾನ್ ಮಾರ್ಗದರ್ಶಕರಾಗಿದ್ದು, ಅವರು ತೋರಿದ ದಾರಿಯಲ್ಲಿ ಅನೇಕ ಶಿಕ್ಷಕರು ರೂಪುಗೊಂಡಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಕಲ್ಪನಾ ಭೀಮಳ್ಳಿ ಮಾತನಾಡಿ, ಉತ್ತಮ ಶಿಕ್ಷಕ ವಿದ್ಯಾರ್ಥಿಗೆ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವುದನ್ನಲ್ಲ, ಜೀವನದ ಸವಾಲುಗಳನ್ನು ಎದುರಿಸುವ ಧೈರ್ಯವನ್ನೂ ಕಲಿಸುತ್ತಾನೆ ಎಂದರು.

ಶರಣಬಸವೇಶ್ವರ ಸಂಸ್ಥಾನ ಅನ್ನದಾಸೋಹದ ಜೊತೆಗೆ ಅಕ್ಷರದಾಸೋಹಕ್ಕೂ ಸಮಾನ ಪ್ರಾಮುಖ್ಯತೆ ನೀಡಿ ಈ ಭಾಗವನ್ನು ಶಿಕ್ಷಣದ ಕೇಂದ್ರವನ್ನಾಗಿ ಬೆಳೆಸುವಲ್ಲಿ ಡಾ.ಅಪ್ಪ ಹಾಗೂ ಡಾ.ಅವ್ವ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜವೇರಿಯಾ ಅಂಜುಮಶೇಖ್ ನಿರೂಪಣೆ ಮತ್ತು ವಂದನೆ ಸಲ್ಲಿಸಿದರು. ಪ್ರಿಯಾಂಕಾ ಸ್ವಾಗತಿಸಿದರು. ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor