ಸಚಿವ ಡಾ.ಅಜಯ್ ಸಿಂಗ್‌ಗೆ ಕಲಬುರಗಿಯಲ್ಲಿ ಅದ್ದೂರಿ ಸ್ವಾಗತ

Update: 2026-08-22 21:35 IST

ಕಲಬುರಗಿ: ಇದೇ ಮೊದಲ ಬಾರಿಗೆ ಸಚಿವರಾಗಿ ಹಾಗೂ ಪ್ರಥಮ ಬಾರಿಗೆ ಕಲಬುರಗಿ ಜಿಲ್ಲೆಗೆ ಆಗಮಿಸಿದ ಸಚಿವ ಡಾ. ಅಜಯ್ ಸಿಂಗ್ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಸಂಜೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಗರದ ನೆಹರುಗಂಜ್ ಪ್ರದೇಶದ ನಗರೇಶ್ವರ ಶಾಲೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಚಿವರಿಗೆ ಭರ್ಜರಿ ಸ್ವಾಗತ ನೀಡಿದರು. ಚಂಡು ಹೂವಿನ ಕೇಸರಿ, ಸೇವಂತಿಗೆ ಹೂವಿನ ಬಿಳಿ ಹಾಗೂ ಪುದಿನಾ ಎಲೆಗಳ ಹಸಿರು ಬಣ್ಣ ಬಳಸಿ ತ್ರಿವರ್ಣ ಧ್ವಜದ ಮಾದರಿಯಲ್ಲಿ ತಯಾರಿಸಿದ್ದ ಬೃಹತ್ ಹೂವಿನ ಹಾರವನ್ನು ಸಚಿವರಿಗೆ ಹಾಕಿ ಜಯಘೋಷ ಮೊಳಗಿಸಲಾಯಿತು.

ಬಳಿಕ ಅಲ್ಲಿಂದ ಆರಂಭವಾದ ಭವ್ಯ ಮೆರವಣಿಗೆ ಸೂಪರ್ ಮಾರ್ಕೆಟ್, ಚೌಕ ವೃತ್ತ ಹಾಗೂ ಜಗತ್ ವೃತ್ತದ ಮೂಲಕ ಸಾಗಿ ಡಾ. ಎಸ್.ಎಂ. ಪಂಡಿತ್ ರಂಗಮಂದಿರದವರೆಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ಆಕರ್ಷಕ ಪ್ರದರ್ಶನಗಳು ಗಮನ ಸೆಳೆದವು.

ಜಗತ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಜಗಜ್ಯೋತಿ ಬಸವೇಶ್ವರ ಅವರ ಪ್ರತಿಮೆಗಳಿಗೆ ಸಚಿವರು ಮಾಲಾರ್ಪಣೆ ಮಾಡಿದರು.

ಡೊಳ್ಳು ಕುಣಿತ, ಲೇಜಿಮ್ ವಾದನ, ತಮಟೆ ಹಾಗೂ ಬ್ಯಾಂಜೋ ವಾದನ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ಮೆರವಣಿಗೆ ಸಾಗಿದ ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್ ಪಕ್ಷದ ಧ್ವಜಗಳು ರಾರಾಜಿಸಿದವು. ಸಚಿವರ ಅಭಿಮಾನಿಗಳು ಬುಲ್ಡೋಜರ್‌ಗಳ ಮೂಲಕ ಗುಲಾಬಿ ಹಾಗೂ ಸೇವಂತಿಗೆ ಹೂವಿನ ದಳಗಳನ್ನು ಎರಚಿ ಸಂಭ್ರಮಿಸಿದರು.

ಮೆರವಣಿಗೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌, ಶಾಸಕ ಅಲ್ಲಮಪ್ರಭು ಪಾಟೀಲ್‌, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಶರಣು ಮೋದಿ, ಚೇತನ ಗೋನಾಯಕ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸಚಿವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News