Kalaburagi | ವಿದ್ಯಾರ್ಥಿಗಳು ತಮ್ಮನ್ನು ತಾವು ಅರಿತು, ಪ್ರೀತಿಸಿಕೊಳ್ಳಬೇಕು: ಡಾ.ಶಾಂತಾ ಭೀಮಸೇನರಾವ್

Update: 2026-08-22 20:24 IST

ಕಲಬುರಗಿ: ವಿದ್ಯಾರ್ಥಿ ಜೀವನವು ಮನುಷ್ಯನ ಬದುಕಿನ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಅವಧಿಯಲ್ಲಿ ರೂಪುಗೊಳ್ಳುವ ಆಲೋಚನೆಗಳು, ಅಭ್ಯಾಸಗಳು, ಸ್ನೇಹಗಳು, ಮೌಲ್ಯಗಳು ಹಾಗೂ ಗುರಿಗಳು ಮುಂದಿನ ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಪುಸ್ತಕದ ಜ್ಞಾನ ಪಡೆಯುವುದರ ಜೊತೆಗೆ ತಮ್ಮನ್ನು ತಾವು ಅರಿತುಕೊಂಡು, ಪ್ರೀತಿಸಿಕೊಳ್ಳುವುದನ್ನು ಕಲಿಯಬೇಕು ಎಂದು ಎಂ.ಎಸ್. ಇರಾಣಿ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಶಾಂತಾ ಭೀಮಸೇನರಾವ್ ಹೇಳಿದರು.

ನಗರದ ಎಂ.ಎಸ್. ಇರಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು ಸಾಮಾನ್ಯವಾಗಿದೆ. ‘ಅವನಿಗೆ ಹೆಚ್ಚು ಅಂಕ ಬಂದಿದೆ’, ‘ಅವಳು ನನ್ನಿಗಿಂತ ಚೆನ್ನಾಗಿ ಮಾತನಾಡುತ್ತಾಳೆ’, ‘ಅವನು ನನ್ನಿಗಿಂತ ಹೆಚ್ಚು ಪ್ರತಿಭಾವಂತ’ ಎಂಬ ಆಲೋಚನೆಗಳು ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇ ಆದ ಪ್ರತಿಭೆ ಮತ್ತು ಸಾಮರ್ಥ್ಯ ಹೊಂದಿರುತ್ತಾನೆ. ಹೀಗಾಗಿ ಇತರರೊಂದಿಗೆ ಹೋಲಿಸಿಕೊಳ್ಳದೆ ತಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ತಮ್ಮನ್ನು ತಾವು ವಿಫಲರೆಂದು ಭಾವಿಸಬಾರದು. ಒಂದು ಪರೀಕ್ಷೆಯ ಫಲಿತಾಂಶವು ವ್ಯಕ್ತಿಯ ಸಂಪೂರ್ಣ ಸಾಮರ್ಥ್ಯ ಅಥವಾ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಕಡಿಮೆ ಅಂಕ ಬಂದಾಗ ತಮ್ಮನ್ನು ದೂಷಿಸಿಕೊಳ್ಳುವ ಬದಲು, ‘ಎಲ್ಲಿ ತಪ್ಪಾಗಿದೆ?’, ‘ಓದುವ ವಿಧಾನದಲ್ಲಿ ಏನು ಬದಲಾವಣೆ ಮಾಡಬೇಕು?’, ‘ಮುಂದಿನ ಬಾರಿ ಹೇಗೆ ಉತ್ತಮ ಸಾಧನೆ ಮಾಡಬಹುದು?’ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ವಿಫಲತೆ ಅಂತ್ಯವಲ್ಲ; ಅದು ಹೊಸ ಪ್ರಯತ್ನಕ್ಕೆ ದಾರಿ ತೋರಿಸುವ ಪಾಠ ಎಂದು ಹೇಳಿದರು.

ಇಂದಿನ ವಿದ್ಯಾರ್ಥಿಗಳ ಜೀವನದಲ್ಲಿ ಮೊಬೈಲ್ ಅವಿಭಾಜ್ಯವಾಗಿದ್ದು, ಜ್ಞಾನ ಸಂಪಾದನೆ ಹಾಗೂ ಕಲಿಕೆಗೆ ತಂತ್ರಜ್ಞಾನ ಬಹಳ ಉಪಯುಕ್ತವಾಗಿದೆ. ಆದರೆ ಮೊಬೈಲ್‌ನ ಅತಿಯಾದ ಬಳಕೆಯಿಂದ ಸಮಯ, ಏಕಾಗ್ರತೆ ಹಾಗೂ ನಿದ್ರೆ ಹಾಳಾಗಬಹುದು. ಹೀಗಾಗಿ ವಿದ್ಯಾರ್ಥಿಗಳು ಮೊಬೈಲ್‌ನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಓದುವ ಸಂದರ್ಭದಲ್ಲಿ ಗಮನ ಬೇರೆಡೆ ಸೆಳೆಯುವ ಸೂಚನೆಗಳನ್ನು ನಿಯಂತ್ರಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಇತರರ ಜೀವನವನ್ನು ತಮ್ಮ ಜೀವನದೊಂದಿಗೆ ಹೋಲಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಶಿಲ್ಪಾ ಅಲ್ಲದ ಮಾತನಾಡಿದರು. ಕಾರ್ಯಕ್ರಮದ ನಿರ್ದೇಶಕಿ ಹಾಗೂ ಉಪನ್ಯಾಸಕಿ ಶ್ವೇತಾ ಶೆಟ್ಟಿ, ಸಂಗೀತಾ ಸಡಕೀನ್, ಡಾ. ಪಾಂಡುರಂಗ ಚಿಂಚನಸೂರ, ಚಂದ್ರಶೇಖರ್ ಪಟ್ಟಣಕರ್, ಡಾ. ಕೃಷ್ಣವೇಣಿ ಪಾಟೀಲ್, ಆನಂದ ಕೊಪ್ಪದ, ರಾಮು ಕಟ್ಟಿ, ಉಷಾ ಪಾಟೀಲ್, ಮಧುಶ್ರೀ ಘಂಟಿ, ವಿಜಯಲಕ್ಷ್ಮೀ ಶಾಬಾದಿ ಹಾಗೂ ಸವಿತಾ ಪಾಟೀಲ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ನಂದಿತಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News