Kalaburagi | ಚಿತ್ತಾಪುರ ಪಟ್ಟಣದಲ್ಲಿ ಅದ್ಧೂರಿಯಾಗಿ ಜರುಗಿದ ಭೀಮ ನಡೆ ಪಥಸಂಚಲನ
ಕಲಬುರಗಿ : ಚಿತ್ತಾಪುರ ಪಟ್ಟಣದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ದಲಿತಪರ ಸಂಘಟನೆಗಳು ಸೇರಿದಂತೆ ಇತರೆ ವಿವಿಧ ಸಮಾಜಗಳು ಒಳಗೊಂಡಂತೆ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾದ ದಿನದ ಅಂಗವಾಗಿ ನಡೆದ ಭೀಮ ನಡೆ ಪಥ ಸಂಚಲನವು ಸೋಮವಾರ ಅದ್ಧೂರಿಯಾಗಿ ನಡೆಯಿತು.
ಚಿತ್ತಾಪುರ ಪಟ್ಟಣದ ಚಿತ್ತಾವಲಿ ವೃತ್ತದಿಂದ ಆರಂಭವಾದ ಪಥ ಸಂಚಲನವು ಕಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ ಮೂಲಕ ಬಜಾಜ್ ಕಲ್ಯಾಣ ಮಂಟಪಕ್ಕೆ ತಲುಪಿತು.
ಮೆರವಣಿಗೆಯಲ್ಲಿ ಸಂವಿಧಾನ ಪೀಠಿಕೆಯೊಂದಿಗೆ ಒಟ್ಟು 22 ಸಮಾಜಗಳ ಗುರುಗಳ ಭಾವಚಿತ್ರಗಳು ನೋಡುಗರ ಗಮನ ಸೆಳೆಯಿತು.
ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಅಂಬಿಗರ ಚೌಡಯ್ಯ, ಮಾದರ ಚೆನ್ನಯ್ಯ, ನಾರಾಯಣ ಗುರು, ಮಹರ್ಷಿ ವಾಲ್ಮೀಕಿ, ಸಂತ ಸೇವಾಲಾಲ್ ಮಹಾರಾಜ್, ಹಡಪದ ಅಪ್ಪಣ್ಣ, ಸಮಗಾರ ಹರಳಯ್ಯ, ಸವಿತಾ ಮಹರ್ಷಿ, ಭಗೀರಥ ಮಹಾರಾಜ್, ಟಿಪ್ಪು ಸುಲ್ತಾನ್, ಶಿವಾಜಿ ಮಹಾರಾಜ್, ಸಿದ್ದರಾಮೇಶ್ವರ, ವಿಶ್ವಕರ್ಮ, ಸರ್ವಜ್ಞ, ಗಾಯಿತ್ರಿ ದೇವಿ, ಶರಣ ಹೂಗಾರ ಮಾದಣ್ಣ, ಮಹಾವೀರ, ನುಲಿಯ ಚಂದಯ್ಯ ಅವರ ಭಾವಚಿತ್ರಗಳ ಜೊತೆಗೆ ಆಯಾ ಸಮಾಜದ ಧ್ವಜಗಳು ರಾರಾಜಿಸಿದವು.
ಬೀದರ್ ಭಾರತೀಯ ಬೌದ್ಧ ಮಹಾಸಭೆಯ 800 ಜನ ಸಮವಸ್ತ್ರದೊಂದಿಗೆ ಭೀಮ ನಡೆ ಪಥಸಂಚಲನಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ವಿವಿಧ ಸಮಾಜದ ಮುಖಂಡರು ಸೇರಿದಂತೆ ಆನೇಕರು ಇದ್ದರು.