ಕಲಬುರಗಿ | ಮಹಿಳೆಯರ ಸಾಧನೆಗೆ ಅಂಬೇಡ್ಕರ್ ಅವರು ಪ್ರತ್ಯಕ್ಷ ಕಾರಣವಾದರೆ ರಮಾಬಾಯಿ ಪರೋಕ್ಷ ಕಾರಣ : ಖೇಮಲಿಂಗ ಬೇಳಮಗಿ
ಕಲಬುರಗಿ : ಮಹಿಳೆಯರು ಈ ಮಟ್ಟಕ್ಕೆ ಬೆಳೆದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಡಾ.ಅಂಬೇಡ್ಕರ್ ಅವರು ಪ್ರತ್ಯಕ್ಷ ಕಾರಣವಾದರೆ ಅಂಬೇಡ್ಕರ್ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಪ್ರೋತ್ಸಾಹಿಸಿದ ರಾಮತಾಯಿ ಪರೋಕ್ಷ ಕಾರಣರಾಗಿದ್ದಾರೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಖೇಮಲಿಂಗ ಬೇಳಮಗಿ ಹೇಳಿದರು.
ವಾಡಿ ಪಟ್ಟಣದ ಸಿದ್ದಾರ್ಥ ಭವನದಲ್ಲಿ ಶುಕ್ರವಾರ ಸಂಜೆ ಸಿದ್ದಾರ್ಥ ತರುಣ ಸಂಘದ ವತಿಯಿಂದ ಏರ್ಪಡಿಸಿದ್ದ ʼಮಾತೆ ರಮಾಬಾಯಿ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮʼ ಉದ್ದೇಶಿಸಿ ಮಾತನಾಡಿದ ಅವರು, ರಮಾಬಾಯಿ ಅವರ ಜಾಗದಲ್ಲಿ ಸಾಮಾನ್ಯ ಮಹಿಳೆ ಇದ್ದರೆ ಅಂಬೇಡ್ಕರ್ ಅವರು ಒಬ್ಬ ಉತ್ತಮ ಪತಿ, ವಿದ್ಯಾವಂತ ವ್ಯಕ್ತಿ ಮಾತ್ರ ಆಗುತ್ತಿದ್ದರೇನೋ. ಆದರೆ, ರಮಾಬಾಯಿ ಅವರ ಸಹಕಾರ ತ್ಯಾಗದ ಕಾರಣ ಅಂಬೇಡ್ಕರ್ ಇಂದು ಇಡೀ ದೇಶಕ್ಕೆ ಬಾಬಾ ಸಾಹೇಬ್ ಆಗಿದ್ದಾರೆ ಎಂದರು.
ಮಾಜಿ ಪುರಸಭೆ ಸದಸ್ಯ ಸೂರ್ಯಕಾಂತ ರದ್ದೇವಾಡಿ ಮಾತನಾಡಿ, ಭಾರತದ ಬಹುಪಾಲು ಚರಿತ್ರೆಯ ದಿಕ್ಕನ್ನೇ ಬದಲಿಸಿದ ಬಾಬಾ ಸಾಹೇಬ್ ಎನ್ನುವ ಬೋಧಿವೃಕ್ಷದ ಗಟ್ಟಿ ಬೇರುಗಳು ಎಂದರೆ, ಅವರ ಸಂಗಾತಿ ರಮಾಬಾಯಿ ಅಂಬೇಡ್ಕರ್. ಆದರೆ, ಸಾಹಿತಿಗಳು, ಸಂಶೋಧಕರು, ಸಾಮಾಜಿಕ ಕಾರ್ಯಕರ್ತರು ತಮ್ಮ ಹೃದಯಕ್ಕೆ ಇಳಿಸಿಕೊಳ್ಳುವುದರಲ್ಲಿ ಸೋತಿದ್ದಾರೆ. ಹಾಗಾಗಿ, ರಮಾತಾಯಿ ಎಂಬ ತ್ಯಾಗದ ತಾಯಿ ನಮ್ಮನ್ನು ತಲುಪಲು ಇಷ್ಟು ವರ್ಷಗಳು ಬೇಕಾಯಿತು ಎಂದರು.
ಈ ಸಂದರ್ಭದಲ್ಲಿ ಸಿದ್ದಾರ್ಥ ತರುಣ ಸಂಘದ ಅಧ್ಯಕ್ಷ ದಿಲೀಪ ಮೈನಾಳ, ಮಹೇಶ್ ರಾಜಳ್ಳಿ, ವಿಶಾಲ ಬಡಿಗೇರ, ಮುಖಂಡರಾದ ಭೀಮಶಾ ಮೈನಾಳ, ವೆಂಕಾರೆಡ್ಡಿ ಸೂಗೂರ, ಪರಮೇಶ್ವರ ಮಾದನ ಹಿಪ್ಪರಗಾ, ಸಿದ್ದಲಿಂಗ ಬಡಿಗೇರ, ಗೌತಮ ಹತ್ತಿ ಪೂಜ್ಯಂತೆ ಸಂಘ ಸೇವಕ ಸಾನಿಧ್ಯ ವಹಿಸಿದ್ದರು. ಮಾಪಮ್ಮ ಮಂದ್ರಾಡ, ಪಾರ್ವತಿ ರದ್ದೇವಾಡಿ, ಲಕ್ಷ್ಮಿ ಕೋಳಕೂರ, ತಾರಾಬಾಯಿ ಮೈನಾಳ, ಚೆನ್ನಮ್ಮ ಹತ್ತಿ ನಿಂಗಮ್ಮ ಕಾಂಬಳೆ, ಅಂಬಿಕಾ ರದ್ದೇವಾಡಿ, ಲಕ್ಷ್ಮಿ ಜೋಗುರ ಗೀತಾ ಕೋಳಕೂರ ಇದ್ದರು. ರವಿ ಕೋಳಕೂರ ಸ್ವಾಗತಿಸಿ ನಿರೂಪಿಸಿದರು.