×
Ad

ಕಲಬುರಗಿ | ನಬಾರ್ಡ್ ನೆರವು ಪಡೆದು ಕೋಲ್ಡ್ ಸ್ಟೋರೇಜ್, ವೇರ್ ಹೌಸ್ ನಿರ್ಮಿಸಿ : ಸಚಿವ ಪ್ರಿಯಾಂಕ್ ಖರ್ಗೆ

Update: 2025-05-12 19:41 IST

ಕಲಬುರಗಿ : ರೈತರು ಬೆಳೆಯುವ ತೋಟಗಾರಿಕೆ ಬೆಳೆಗಳನ್ನು ಮತ್ತು ಕೃಷಿ ಉತ್ಪನ್ನಗಳನ್ನು ಶೇಖರಿಸಲು ನಬಾರ್ಡ್-ವಿಶ್ವ ಬ್ಯಾಂಕ್ ನೆರವು ಪಡೆದು ಕೋಲ್ಡ್ ಸ್ಟೋರೇಜ್, ವೇರ್ ಹೌಸ್ ನಿರ್ಮಿಸಬೇಕು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ‌ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ‌ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಮತ್ತು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರೊಂದಿಗೆ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ನಬಾರ್ಡ್ ಮತ್ತು ವಿಶ್ವ ಬ್ಯಾಂಕ್ ನಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ ಮಾತನಾಡಿ, ಜೇವರ್ಗಿಯಲ್ಲಿ ಮೆಣಸಿನಕಾಯಿ ಶೇಖರಣೆಗೆ 7.50 ಕೋಟಿ ರೂ. ವೆಚ್ಚದಲ್ಲಿ 5,000 ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ತೆರೆಯಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕಲಬುರಗಿ ರೊಟ್ಟಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಸಂಸ್ಕರಣೆ, ಮಾರುಕಟ್ಟೆ ಸರಿಯಾಗಿ ಒದಗಿಸಿದಲ್ಲಿ ಸಿರಿಧಾನ್ಯದ ರೊಟ್ಟಿ ತಯಾರಿಸುವ ಮಹಿಳೆಯರು ಇನ್ನು ಹೆಚ್ಚು ಆರ್ಥಿಕ ಲಾಭ ಪಡೆಯಬಹುದಾಗಿದೆ. ಭೌಗೋಳಿಕ ಸೂಚ್ಯಂಕ ಹೊಂದಿರುವ, ತೊಗರಿ, ಭೀಮಾ ಪಲ್ಸಸ್, ಕೆಂಬಾಳೆಗೂ ಮಾರುಕಟ್ಟೆ ಕಲ್ಪಿಸಿ ರೈತರಿಗೆ ನೆರವಾಗಬೇಕು ಎಂದು ಸಚಿವ‌ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಚರ್ಚೆ ವೇಳೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಭಕ್ಷ ಅವರು ಮಾತನಾಡಿ, ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ ದುರಸ್ತಿ, ರಸ್ತೆ-ಚರಂಡಿ ನಿರ್ಮಾಣದಂತಹ ಕಾರ್ಯಕ್ರಮಗಳು ಹಾಕಿಕೊಳ್ಳುತ್ತಿದ್ದು, ಕಳೆದ 2024-25ನೇ ಸಾಲಿಗೆ ಜಿಲ್ಲೆಯ 11 ಗ್ರಾಮ ಆಯ್ಕೆ ಮಾಡಿದೆ ಎಂದರು. ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ತಮ್ಮ ಕ್ಷೇತ್ರದ ಪಾಣೆಗಾಂವ, ಕೆರಿಭೋಸಗಾ ಗ್ರಾಮದಲ್ಲಿ ಅಪೂರ್ಣ ಕಾಮಗಾರಿಗಳಾಗಿದ್ದು, ಬಾಕಿ ಕೆಲಸ ಕೂಡಲೆ ಗಮನಹರಿಸಿ ಪೂರ್ಣಗೊಳಿಸಬೇಕು ಎಂದರು.

ಕಲಬುರಗಿ ಔಟರ್ ರಿಂಗ್ ರೋಡ್ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಇಬ್ರಾಹಿಂ ಮಾತನಾಡಿ, ಹಿಂದೆ ಕಳುಹಿಸಿದ ಪ್ರಸ್ತಾವನೆ ಕೇಂದ್ರ ತಿರಸ್ಕರಿಸಿದೆ ಎಂದರು. ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಮಾತನಾಡಿ, ಕೂಡಲೇ ಜಮೀನು ಭೂಸ್ವಾಧೀನಕ್ಕೆ ಬೇಕಾದ ಮೊತ್ತದ ಕುರಿತು ಅಧ್ಯಯನ ಮಾಡಿ, ರೈತರ ಜೊತೆಗೂ ಚರ್ಚಿಸಿ ಎಂದು ಸಲಹೆ ನೀಡಿದರು.

ವಾಡಿ, ಹೀರಾಪುರ ಆರ್.ಓ.ಬಿ ಕಾಮಗಾರಿಗಳು ನೆನೆಗುದ್ದಿಗೆ ಬಿದ್ದಿದ್ದು, ಕೂಡಲೇ ಇದಕ್ಕೆ ಚಾಲನೆ ನೀಡಿ ಪೂರ್ಣಗೊಳಿಸಬೇಕು. ಇನ್ನು ರೈಲ್ವೆ ಬ್ರಿಡ್ಜ್ ನಿಮಾರ್ಣದ ಜೊತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಹ ಆದ್ಯತೆ ಮೇಲೆ ಮಾಡಬೇಕು. ಪ್ರಕೃತಿ ವಿಕೋಪ ಕಾಮಗಾರಿಗಳು ಬಾಕಿ ಉಳಿಸಿದ್ದು, ಅದನ್ನು ಸಹ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಸಚಿವರು ಸೂಚಿಸಿದಲ್ಲದೆ ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ರಾಜ್ಯದ ಪಾಲು ಇರುವುದರಿಂದ ಶಾಸಕರ ಗಮನಕ್ಕೆ ತಂದು ಗುದ್ದಲಿ ಪೂಜೆ ನೆರವೇರಿಸಿ ಕೆಲಸ ಅರಂಭಿಸಬೇಕು ಎಂದು ಸೂಚನೆ ನೀಡಿದರು.

ಬಸವ, ಪಿ.ಎಂ.ಅವಸ್ ಯೋಜನೆ ಸೇರಿದಂತೆ ವಿವಿಧ‌ ವಸತಿ ಯೋಜನೆಯಡಿ 2016-17 ರಿಂದ 2024-25ರ ವರೆಗೆ ನೀಡಿದ ಗುರಿಗೆ ಅನುಗುಣವಾಗಿ ಜನರು ಇನ್ನು ಮನೆ ಏಕೆ ಕಟ್ಟಿಕೊಂಡಿಲ್ಲ? ಎಂದು ಸಚಿವ‌ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ಅಸಮಾಧಾನ ವ್ಯಕ್ತಪಡಿಸಿ, ಕೂಡಲೆ ವಸತಿ ಯೋಜನೆ ಪೂರ್ಣಗೊಳಿಸಿ ಸೂರಿಲ್ಲದವರಿಗೆ ಸೂರು ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿ.ಪಿ.ಓ ಎಸ್.ಎಸ್.ಮಠಪತಿ ಅವರಿಗೆ ನಿರ್ದೇಶನ ನೀಡಿದರು.

ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ :

ಕಲಬುರಗಿ ರಿಂಗ್ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್-ಹುಮನಾಬಾದ ರಸ್ತೆ ಮಧ್ಯದಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ನಿಧಾನಗತಿಯಿಂದ ರಸ್ತೆ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದನ್ನು ತಪ್ಪಿಸಲು ರಸ್ತೆ ಕೆಲಸ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಬೇಕೆಂದು ಕರ್ನಾಟಕ ರೇಷ್ಮೆ ಅಭಿವೃದ್ದಿ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಅನಗತ್ಯ ವಿಳಂಬ ದೋರಣೆ ಸಹಿಸಲ್ಲ. ಕೆಲಸ ಮಾಡದಿದ್ದರೆ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಈಗಾಗಲೆ ಸರ್ವಿಸ್ ರಸ್ತೆ ಮಾಡಿರುವ ಸ್ಥಳದಲ್ಲಿ ಅಂಗಡಿ ಮುಂಗಟ್ಟುಗಳು ತಮ್ಮ ವಸ್ತುಗಳನ್ನು ಮಾರಾಟಕ್ಕೆ ಇಟ್ಟುಕೊಂಡಿದ್ದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೂಡಲೆ ಅತಿಕ್ರಮಣ ತೆರವುಗೊಳಿಸಬೇಕು ಎಂದು ಕಲಬುರಗಿ ಪಾಲಿಕೆ ಅವಿನಾಶ ಶಿಂಧೆ ಅವರಿಗೆ ಸಚಿವರು ಸೂಚನೆ ನೀಡಿದರು.

ಪಿ.ಎಂ. ಮಿತ್ರ ಟೆಕ್ಸ್ ಟೈಲ್ ಪಾರ್ಕ್ ಕೆಲಸ ತ್ವರಿತಗೊಳಿಸಿ :

ಒಂದು ಸಾವಿರ ಎಕರೆ ಪ್ರದೇಶದಲ್ಲಿ ಪಿ.ಎಂ. ಮಿತ್ರ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ರಾಜ್ಯ ಸರ್ಕಾರ ಕಳೆದ ಕಲಬುರಗಿ ಕ್ಯಾಬಿನೆಟ್ ನಲ್ಲಿ 392 ಕೋಟಿ. ರೂ. ಮೊತ್ತದ ವಿವಿಧ ಮೂಲಸೌಕರ್ಯ ಒದಗಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಬಿಡುಗಡೆಯಾದ ಹಣಕ್ಕೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಘಟಕದಲ್ಲಿ ಕೆಲಸ ಮಾಡಲು ಬೇಕಾದ ಕೌಶಲ್ಯತೆ ಬಗ್ಗೆ ತಿಳಿಸಿದಲ್ಲಿ ಈಗಿನಿಂದಲೆ ಸ್ಥಳೀಯರಿಗೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಕೌಶಲ್ಯ ನೀಡಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು.

15 ದಿನದಲ್ಲಿ ಪ್ರಸ್ತಾವನೆ ಸಲ್ಲಿಸಿ :

ಜಿಲ್ಲೆಯಿಂದ ಕೇಂದ್ರ ಸರ್ಕಾರಕ್ಕೆ ಹೋಗಿರುವ ಪ್ರಸ್ತಾವನೆಗಳು, ತಿರಸ್ಕೃತ ಪ್ರಸ್ತಾವನೆಗಳು ಹಾಗೂ ಹೊಸದಾಗಿ ಸಲ್ಲಿಸಬೇಕಾದ ಪ್ರಸ್ತಾವನೆಗಳು ಕುರಿತು 15 ದಿನದಲ್ಲಿ ವರದಿ‌ ನೀಡಬೇಕೆಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಡಿ.ಸಿ., ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಇದರ ಉಸ್ತುವಾರಿ ನೋಡಿಕೊಳ್ಳಬೇಕು ಎಂದರು.

ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್,‌ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News