ಕಲಬುರಗಿ| ಹುಬ್ಬಳ್ಳಿ ಮರ್ಯಾದಾ ಹತ್ಯೆ ಖಂಡಿಸಿ ಡಿವೈಎಫ್ಐ ಪ್ರತಿಭಟನೆ
ಕಲಬುರಗಿ: ಹುಬ್ಬಳ್ಳಿಯ ಗ್ರಾಮವೊಂದರಲ್ಲಿ ನಡೆದ ಮರ್ಯಾದಾ ಹತ್ಯೆಯನ್ನು ಖಂಡಿಸಿ ಡಿವೈಎಫ್ಐ ಕಲಬುರಗಿ ಜಿಲ್ಲಾ ಸಮಿತಿ ಮಂಗಳವಾರ ಪ್ರತಿಭಟನೆ ನಡೆಯಿತು.
ನಮ್ಮ ಸಮಾಜದಲ್ಲಿರುವ ಪುರೋಹಿತ ಶಾಹಿ- ಚತುರ್ವರ್ಣ ವ್ಯವಸ್ಥೆಯನ್ನು ಮತ್ತೆ ಎತ್ತಿಡಿಯಲು ಕೋಮುವಾದಿ ಶಕ್ತಿಗಳು ಕೆಲಸ ಮಾಡುತ್ತಿವೆ. ಯುವಜನರ ಅದರಲ್ಲೂ ಮಹಿಳೆಯರ ಆಯ್ಕೆ ಸ್ವಾತಂತ್ರಕ್ಕೆ ಎಂದಿಗೂ ಈ ಸಮಾಜದಲ್ಲಿ ಮನ್ನಣೆ ಸಿಗುತ್ತಿಲ್ಲ. ಮಹಿಳೆಯನ್ನು ಕೀಳಾಗಿ ಕಾಣುವ ಮನುಸ್ಮೃತಿಯನ್ನು ನಮ್ಮೆಲ್ಲರ ಮೇಲೆ ಹೇರುವ ಪ್ರಯತ್ನ ನಡೆದಿದೆ. ಜಾತಿ ಹೆಸರಲ್ಲಿ ನಡೆಯುವ ಈ ಕೊಲೆಗಳು, ದೌರ್ಜನ್ಯಗಳು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮರ್ಯಾದಾ ಹತ್ಯೆ ತಡೆಗಾಗಿ ನಿರ್ದಿಷ್ಟ ಕಾನೂನು ರೂಪಿಸಬೇಕು. ಯುವಜನರ ಆಯ್ಕೆ ಹಕ್ಕನ್ನು ಎತ್ತಿಹಿಡಿಯಲು ಸರಕಾರ ಕಾನೂನುಗಳನ್ನು ರಚಿಸಬೇಕು. ಹತ್ಯೆ ಮಾಡಿದ ಮತ್ತು ಯುವತಿಯ ಪತಿಯ ಮನೆಯವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕಾಶಗೌಡ ಪಾಟೀಲ್ ಮತ್ತು ಎಲ್ಲಾ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ DYFI ರಾಜ್ಯಾಧ್ಯಕ್ಷ ಲವಿತ್ರ ವಸ್ತ್ರದ, ಸಾನಿಯಾ, ಎಸ್ಎಫ್ಐ ಸಂಘಟನೆಯ ಸರ್ವೇಶ ಮಾವಿನಕರ್, ಸುಜಾತಾ ವೈ, ಸೌಮ್ಯ ಬಿರಾದಾರ, ಸ್ವರಾಜ, ತಾಯಣ್ಣ, ನಿತಿಷ್, ನೇಸಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.