ಕಲಬುರಗಿ | ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 5 ಕೋಟಿ ರೂ. ಶಿಷ್ಯವೇತನ : ಡಾ.ದಾಕ್ಷಾಯಿಣಿ ಎಸ್.ಅಪ್ಪ
"ಎಸ್ಬಿಆರ್–ಸಿಇಟಿ ಪ್ರವೇಶ ಪರೀಕ್ಷೆ ಮಾ.15ರಿಂದ ಆರಂಭ"
ಕಲಬುರಗಿ: ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಉದ್ದೇಶದಿಂದ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಹೆಸರಿನಲ್ಲಿ ನೀಡಲಾಗುವ 5 ಕೋಟಿ ರೂ. ಮೊತ್ತದ ಎಸ್ಬಿಆರ್–ಸಿಇಟಿ (SBR-CET) ಶಿಷ್ಯವೇತನ ಪರೀಕ್ಷೆಗಳು ಮಾ.15ರಿಂದ ಆರಂಭವಾಗಲಿವೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ತಿಳಿಸಿದ್ದಾರೆ.
ಬುಧವಾರ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.15ರಂದು ಸಿಬಿಎಸ್ಇ ವಿದ್ಯಾರ್ಥಿಗಳಿಗೆ, ಎ.5ರಂದು ಐಸಿಎಸ್ಇ ವಿದ್ಯಾರ್ಥಿಗಳಿಗೆ ಹಾಗೂ ಎ.12ರಂದು ಕರ್ನಾಟಕ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಎಸ್ಬಿಆರ್–ಸಿಇಟಿ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಳೆದ 12 ವರ್ಷಗಳಿಂದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಈ ಶಿಷ್ಯವೇತನ ನೀಡಲಾಗುತ್ತಿದೆ. ಕಳೆದ ವರ್ಷ 120 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ 180 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಆನ್ಲೈನ್ ನೋಂದಣಿಗೆ ಅವಕಾಶ :
ಎಸ್.ಬಿ.ಆರ್ ಸಿ.ಇ.ಟಿ.ಗಾಗಿ ವಿದ್ಯಾರ್ಥಿಗಳು ಆನ್ಲೈನ್ ನೋಂದಣಿ ಮಾಡಿಕೊಳ್ಳಬೇಕು. ಸಿಬಿಎಸ್ಇ ವಿದ್ಯಾರ್ಥಿಗಳು ಮಾ. 13 ರೊಳಗಾಗಿ, ಐಸಿಎಸ್ಇ ವಿದ್ಯಾರ್ಥಿಗಳು ಏ.3 ರೊಳಗಾಗಿ ಹಾಗೂ ಕರ್ನಾಟಕ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಏ.10 ರೊಳಗಾಗಿ ಸಂಬಂಧಪಟ್ಟ ವೈಬ್ ಸೈಟ್ ನಲ್ಲಿ ಅಥವಾ ಕೊಟ್ಟಿರುವ ಕ್ಯೂ ಆರ್ ಕೋಡ್ನಿಂದ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಎಸ್.ಬಿ.ಆರ್-ಸಿಇಟಿ ಪರೀಕ್ಷೆಯಲ್ಲಿ ಟಾಪ್ ಗಳಿಸಿದ 180 ವಿದ್ಯಾರ್ಥಿಗಳಿಗೆ ಮೂರು ಹಂತದಲ್ಲಿ ಸ್ಕಾಲರ್ಶಿಪ್ ದೊರೆಯಲಿದೆ. ಮೊದಲ 60 ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜು ಹಾಗೂ ವಸತಿ ನಿಲಯದ ಶುಲ್ಕ ಇರುವುದಿಲ್ಲ. ನಂತರದ 60 ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಹಾಗೂ ಕಾಲೇಜು ಶುಲ್ಕದಲ್ಲಿ ಶೇ.50ರಷ್ಟು ಶುಲ್ಕ ವಿನಾಯಿತಿ ಹಾಗೂ ನಂತರದ 60 ರ್ಯಾಂಕ್ ಪಡೆದವರಿಗೆ ಕಾಲೇಜು ಹಾಗೂ ಹಾಸ್ಟೆಲ್ ಪ್ರವೇಶದಲ್ಲಿ ಶೇ.25ರಷ್ಟು ಶುಲ್ಕ ವಿನಾಯಿತಿ ದೊರೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಹೆಸರಿನ ಶಿಷ್ಯವೇತನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ದೊಡ್ಡಪ್ಪ ಅಪ್ಪ ಅವರ ಹೆಸರಿನಲ್ಲಿ ಶಿಷ್ಯವೇತನ ನೀಡಲಾಗುವುದು. ಈ ಬಾರಿ 180 ವಿದ್ಯಾರ್ಥಿಗಳಿಗೆ 5 ಕೋಟಿ ರೂ. ಸ್ಕಾಲರ್ಶಿಪ್ ನೀಡಲಾಗುವುದು.ಎಸ್ಬಿಆರ್ ನಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಂತೆ ಮುಂದಿನ ವಿದ್ಯಾರ್ಥಿಗಳು ಆಗಲಿ ಎಂಬುದು ನಮ್ಮ ಆಶಯವಾಗಿದೆ.
-ಡಾ.ದಾಕ್ಷಾಯಿಣಿ ಅಪ್ಪ, ಚೇರ್ಪರ್ಸನ್ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ
ಬಡವರಿಗಾಗಿ ನಡೆಸುತ್ತಿರುವ ಈ ಸಿಇಟಿ ಪರೀಕ್ಷೆಯಲ್ಲಿ ಕಳೆದ ವರ್ಷ ಸುಮಾರು 9,000 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಬಾರಿ ಅದಕ್ಕೂ ಮೀರಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆ ಇದೆ.
-ಬಸವರಾಜ್ ದೇಶಮುಖ, ಕಾರ್ಯದರ್ಶಿ,ಶರಣಬಸವೇಶ್ವರ ವಿದ್ಯಾವರ್ಧಕ ಸಂಘ