ಕಲಬುರಗಿ| ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕೃಷಿ ಪರಿಕರ, ಕಬ್ಬು ಬೆಂಕಿಗಾಹುತಿ
Update: 2026-02-01 19:36 IST
ಕಲಬುರಗಿ: ತಾಲೂಕಿನ ಹೇರೂರ(ಕೆ) ಗ್ರಾಮದ ರೈತ ರೇವಣಸಿದ್ದಪ್ಪ ಸಿದ್ದಣ್ಣ ಕುಂಬಾರ ಅವರಿಗೆ ಸೇರಿದ ಐದು ಎಕರೆ ಕಬ್ಬಿನ ತೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ 10 ಟನ್ ಕಬ್ಬು ಸೇರಿದಂತೆ ಕೃಷಿ ಪರಿಕರಗಳು ಶನಿವಾರ ಮಧ್ಯರಾತ್ರಿ ಬೆಂಕಿಗಾಹುತಿಯಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಒಂದು ಎಕರೆಯಲ್ಲಿನ 10 ಟನ್ ಕಬ್ಬು ನಾಶವಾಗಿದೆ. ಐದು ಎಕರೆಯಲ್ಲಿರುವ ಕೃಷಿ ಡ್ರಿಪ್, ಲ್ಯಾಟ್ರಲ್, ಸ್ಪಿಂಕ್ಲರ್ ಪೈಪ್ ಗಳು ಮತ್ತು ಸೋಲಾರ್ ಬೇಲಿ ಹೊತ್ತಿ ಉರಿದು ಕರಕಲಾದ ಪರಿಣಾಮ ಅಂದಾಜು 6 ಲಕ್ಷ ರೂ.ಗಳ ಕೃಷಿ ಪರಿಕರಗಳು ನಾಶವಾಗಿವೆ ಎಂದು ರೈತ ರೇವಣಸಿದ್ದಪ್ಪ ಕುಂಬಾರ ಅಳಲನ್ನು ತೋಡಿಕೊಂಡರು.
ಹೊಲದಲ್ಲಿರುವ ವಿದ್ಯುತ್ ಕಂಬಗಳು, ಜೋತುಬಿದ್ದ ವೈರ್ಗಳು ಸರಿಪಡಿಸುವಂತೆ ಹೆಬ್ಬಾಳ ಕೆಇಬಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಮನವಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ರೈತ ರೇವಣಸಿದ್ದಪ್ಪ ಕುಂಬಾರ ಆರೋಪಿಸಿದ್ದಾರೆ.