ಕಲಬುರಗಿ | ಕೇಂದ್ರ ಕಾರಾಗೃಹದ ಕೈದಿಗಳಿಬ್ಬರ ನಡುವೆ ಗಲಾಟೆ : ಪ್ರಕರಣ ದಾಖಲು
Update: 2025-05-15 18:39 IST
ಕಲಬುರಗಿ ಕೇಂದ್ರ ಕಾರಾಗೃಹ
ಕಲಬುರಗಿ : ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಕೈದಿಯೋರ್ವನ ಮೇಲೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಕೈದಿ ತುಳಸಿರಾಮ್ ಇನ್ನೋರ್ವ ವಿಚಾರಣಾ ಕೈದಿಯಾಗಿರುವ ಕಿರಣ್ ರಮೇಶ್ ಶೆಟ್ಟಿ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಗಾಯಗೊಳಿಸಿದ್ದಾನೆ. ಅಲ್ಲದೇ, ಕಾರಾಗೃಹದ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ ತುಳಸಿರಾಮ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ತುಳಸಿರಾಮ್ ಮತ್ತು ಕಿರಣ್ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಏಕಾಏಕಿ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಗಾಯಗೊಂಡ ಕಿರಣ್ ಶೆಟ್ಟಿಯನ್ನು ಕಾರಾಗೃಹದಲ್ಲೇ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.