Kalaburagi | ಜಮೀನು ವಿವಾದ ; ದಲಿತ ಕುಟುಂಬದ ಮೇಲೆ ಜಾತಿ ನಿಂದನೆ ಆರೋಪ; 12 ಮಂದಿಯ ವಿರುದ್ಧ ಪ್ರಕರಣ ದಾಖಲು
ಕಲಬುರಗಿ : ಕಮಲಾಪುರ ತಾಲೂಕಿನ ಕಟ್ಟೊಳ್ಳಿ ಗ್ರಾಮದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದಲಿತ ಕುಟುಂಬದ ವಿರುದ್ಧ ಜಾತಿ ನಿಂದನೆ, ಅಕ್ರಮ ಪ್ರವೇಶ, ಹಲ್ಲೆಗೆ ಯತ್ನ ಹಾಗೂ ಜೀವ ಬೆದರಿಕೆ ಆರೋಪದಡಿ 12 ಮಂದಿಯ ವಿರುದ್ಧ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪುರ ತಾಲೂಕಿನ ಕಟ್ಟೊಳ್ಳಿ ಗ್ರಾಮದ ಪ್ರಕಾಶ್ ಸಿಂಗೆ (48) ನೀಡಿದ ದೂರಿನ ಮೇರೆಗೆ ಅದೇ ಗ್ರಾಮದ ಸಂಗಪ್ಪ ಗುರುಪಾದಪ್ಪ, ನಿಖಿಲ ರೇವಣಸಿದ್ದಪ್ಪ, ಜಗದೇವಪ್ಪ ಗುರುಪಾದಪ್ಪ, ರೇವಣಸಿದ್ದ ಗುರುಪಾದಪ್ಪ, ಅನಿಲ್ ರೇವಣಸಿದ್ದಪ್ಪ, ಚೇತನ್ ಸಂಗಪ್ಪ, ಸರೋಜನಿ ಸಂಗಪ್ಪ, ಲಕ್ಷ್ಮೀ ರೇವಣಸಿದ್ದಪ್ಪ, ಸಿದ್ದಮ್ಮ ಜಗದೇವಪ್ಪ, ಸುನೀಲ್ ಜಗದೇವಪ್ಪ, ಗುಂಡಮ್ಮ ಹಾಗೂ ಸುಲೇಮಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಮಹಾಗಾಂವ ಗ್ರಾಮದ ವ್ಯಾಪ್ತಿಯ ಸರ್ವೇ ನಂ.94/1ರಲ್ಲಿರುವ ತಮ್ಮ 3 ಎಕರೆ 30 ಗುಂಟೆ ಜಮೀನಿನಲ್ಲಿ ಜುಲೈ 20ರಂದು ತೊಗರಿ ಬಿತ್ತನೆ ಮಾಡಲಾಗಿತ್ತು. ಬಳಿಕ ಮಧ್ಯಾಹ್ನ ಜಮೀನಿಗೆ ತೆರಳಿದಾಗ ಆರೋಪಿಗಳು ಅನುಮತಿಯಿಲ್ಲದೆ ಹೊಲಕ್ಕೆ ಪ್ರವೇಶಿಸಿ ಮತ್ತೊಮ್ಮೆ ಬಿತ್ತನೆ ಮಾಡುತ್ತಿರುವುದನ್ನು ಕಂಡು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, ಕೆಲ ಮಹಿಳೆಯರು ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಟ್ರ್ಯಾಕ್ಟರ್ ಹಾಯಿಸಲು ಯತ್ನಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು, ಈ ಘಟನೆಗೆ ಸಂಬಂಧಿಸಿದಂತೆ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಜಾತಿ ನಿಂದನಾ ಪ್ರಕರಣವಿರುವುದರಿಂದ ಅದನ್ನು ಡಿಸಿಆರ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಕುರಿತು ಅವರೇ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.