Kalaburagi | ಅತಿ ಹಿಂದುಳಿದ ಸಮುದಾಯಗಳು ರಾಜಕೀಯವಾಗಿ ಸಂಘಟಿತರಾಗಲಿ: ಬಿ.ಕೆ.ಮೋಹನ್ ಕುಮಾರ್
ಕಲಬುರಗಿ: ಅತಿ ಹಿಂದುಳಿದ ಸಮುದಾಯಗಳು ರಾಜಕೀಯವಾಗಿ ಸಂಘಟಿತರಾಗಿ ಸ್ವಾಭಿಮಾನದಿಂದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಕರ್ನಾಟಕ ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ರಾಜ್ಯಾಧ್ಯಕ್ಷ ಬಿ.ಕೆ.ಮೋಹನ್ ಕುಮಾರ್ ಕರೆ ನೀಡಿದರು.
ನಗರದ ಯಾತ್ರಿಕ್ ನಿವಾಸದಲ್ಲಿ ವಿಐಪಿ ಪಕ್ಷ ಆಯೋಜಿಸಿದ್ದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, “ನಮ್ಮ ಮತ ನಮಗೆ” ಎಂಬ ಘೋಷಣೆಯೊಂದಿಗೆ ಅತಿ ಹಿಂದುಳಿದ ಸಮುದಾಯಗಳ ರಾಜಕೀಯ ಹಕ್ಕುಗಳ ರಕ್ಷಣೆಗೆ ಪಕ್ಷ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.
ರಾಜ್ಯದ ಹಲವು ಕ್ಷೇತ್ರಗಳಲ್ಲಿ ಅತಿ ಹಿಂದುಳಿದ ಸಮುದಾಯಗಳ ಮತಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಪರಿಸ್ಥಿತಿಗೆ ತೆರೆ ಎಳೆಯುವ ಉದ್ದೇಶದಿಂದ ವಿಐಪಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲಾಗುತ್ತಿದ್ದು, ಎಲ್ಲಾ ಅತಿ ಹಿಂದುಳಿದ ಸಮುದಾಯಗಳು ಪಕ್ಷವನ್ನು ಬೆಂಬಲಿಸಿ ತಮ್ಮ ರಾಜಕೀಯ ಅಸ್ತಿತ್ವವನ್ನು ಬಲಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಎಚ್.ಪ್ರಶಾಂತ್ ಮಾತನಾಡಿ, ಅತಿ ಹಿಂದುಳಿದ ಸಮುದಾಯಗಳ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಂಡು ಅವರ ಸಾಮಾಜಿಕ ಹಾಗೂ ರಾಜಕೀಯ ಹಕ್ಕುಗಳನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ. ಸಂವಿಧಾನಬದ್ಧವಾಗಿ ದೊರೆಯಬೇಕಾದ ಅವಕಾಶಗಳಿಂದ ಅವರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಸಂಚಾಲಕ ಶಾಂತಪ್ಪ ಕೂಡಿ ಮಾತನಾಡಿ, ಶೀಘ್ರದಲ್ಲೇ ಕಲಬುರಗಿಯಲ್ಲಿ ವಿಐಪಿ ಪಕ್ಷದ ಜಿಲ್ಲಾ ಕಚೇರಿ ಆರಂಭಿಸಲಾಗುವುದು. ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳುವುದರ ಜೊತೆಗೆ ವಿವಿಧ ಘಟಕಗಳ ಸಮಿತಿಗಳನ್ನು ರಚಿಸಲಾಗುವುದು. ಪಕ್ಷದ ಎಲ್ಲ ಸಮಿತಿಗಳಲ್ಲಿ ಅತಿ ಹಿಂದುಳಿದ ಸಮುದಾಯಗಳ ಮುಖಂಡರಿಗೆ ಆದ್ಯತೆ ನೀಡಿ ಸಾಮಾಜಿಕ ಹಾಗೂ ರಾಜಕೀಯ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಕೋಲಿ–ಕಬ್ಬಲಿಗ ಸಮಾಜದ ಮುಖಂಡರು ಭಾಗವಹಿಸಿದ್ದರು. ಶಂಕು ಮ್ಯಾಕೇರಿ, ದೌಲಪ್ಪ ಚಿಂಚೋಳಿ, ಅಣ್ಣಪ್ಪ ಜಮಾದಾರ್, ಮೋಹನ್ ಪಾಟೀಲ್, ಈರಣ್ಣ ನಾಟೀಕರ್, ರವಿ ಡೋಂಗರಗಾಂವ್, ಧರ್ಮರಾಜ್ ನಾಟೀಕರ್, ಶಿವಾನಂದ ಅಣಜಗಿ, ಅನಿಲ್ ಕೂಡಿ, ಚಂದ್ರಕಾಂತ್ ಕಿರಸಾವಳಗಿ, ಚಂದ್ರಕಾಂತ್ ಜಮಾದಾರ್, ನಾಮದೇವ ಸರಸಾಂಭ, ದೇವು ತಳವಾರ್, ಗುರು ಜುಲ್ಫಿ, ಸಂತೋಷ್ ಬೆಣ್ಣೂರು, ನಿಂಗಪ್ಪ ದೇವಣಗಾಂವ್, ರಾಜು ಸೊನ್, ರಮೇಶ್ ಬಾದ್ನಳ್ಳಿ, ಪ್ರೇಮ್ ಕೋಳಿ, ಗುರು ನಾಟೀಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.