×
Ad

Kalaburagi | ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು: ಪ್ರೊ.ಬಸವರಾಜ ಕುಬಕಡ್ಡಿ

ಸಿಯುಕೆಯಲ್ಲಿ ಹಾಸ್ಟೆಲ್ ಕೇರ್‌ಟೇಕರ್‌ಗಳಿಗೆ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಾಗಾರ

Update: 2026-07-08 19:25 IST

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ವಿದ್ಯಾರ್ಥಿ ಕಲ್ಯಾಣ ವಿಭಾಗದ ವತಿಯಿಂದ ಹಾಸ್ಟೆಲ್ ಕೇರ್‌ಟೇಕರ್‌ಗಳಿಗೆ “ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ: ಜಾಗೃತಿ, ಗುರುತಿಸುವಿಕೆ ಮತ್ತು ಪ್ರತಿಕ್ರಿಯೆ” ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾರ್ಥಿ ಕಲ್ಯಾಣ ವಿಭಾಗ ಹಾಗೂ ಕಾನೂನು ವಿಭಾಗದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ, ಸುರಕ್ಷತೆ ಮತ್ತು ಯೋಗಕ್ಷೇಮ ಕಾಪಾಡುವಲ್ಲಿ ಹಾಸ್ಟೆಲ್ ಕೇರ್‌ಟೇಕರ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಸಿಯುಕೆ ಕ್ಯಾಂಪಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿವಿಧ ಭಾಷೆ, ಸಂಸ್ಕೃತಿ ಹಾಗೂ ಸಾಮಾಜಿಕ ಹಿನ್ನೆಲೆಯ ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್ ಕೇರ್‌ಟೇಕರ್‌ಗಳು ಕೇವಲ ಆಡಳಿತಾತ್ಮಕ ಜವಾಬ್ದಾರಿಗಳನ್ನಷ್ಟೇ ಅಲ್ಲದೆ ಮಾರ್ಗದರ್ಶಕರು, ಸಲಹೆಗಾರರು ಹಾಗೂ ಪೋಷಕರಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳೊಂದಿಗೆ ಸಹಾನುಭೂತಿ ಮತ್ತು ಗೌರವದಿಂದ ವರ್ತಿಸಬೇಕು. ತರಗತಿಗಳ ಹಾಜರಾತಿ, ರಾತ್ರಿ ವೇಳೆ ಸುರಕ್ಷತೆ, ವಸತಿ ನಿಲಯದಲ್ಲಿನ ಉಪಸ್ಥಿತಿ ಹಾಗೂ ದೈಹಿಕ ಅಥವಾ ಮಾನಸಿಕ ಆರೋಗ್ಯ ಸಮಸ್ಯೆಗಳ ಲಕ್ಷಣಗಳನ್ನು ಗಮನಿಸಿ ಸಮಯೋಚಿತವಾಗಿ ಸ್ಪಂದಿಸುವುದು ಅಗತ್ಯ ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಸಿಯುಕೆ ಸಲಹೆಗಾರರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಉತ್ತರ ಯು.ವಿ. ಮತ್ತು ಸಂದೇಶ್ ಜೆ.ಆರ್. ಅವರು ಮಾನಸಿಕ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು, ವಿದ್ಯಾರ್ಥಿಗಳೊಂದಿಗೆ ಪರಿಣಾಮಕಾರಿ ಸಂವಹನ ನಡೆಸುವುದು, ಸವಾಲಿನ ಸಂದರ್ಭಗಳನ್ನು ಸಹಾನುಭೂತಿಯಿಂದ ನಿರ್ವಹಿಸುವುದು ಹಾಗೂ ಅಗತ್ಯವಿದ್ದಾಗ ಸೂಕ್ತ ಮಾರ್ಗದರ್ಶನ ಮತ್ತು ನೆರವು ಒದಗಿಸುವ ಕುರಿತು ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಹಾಯಕ ಡೀನ್ ಡಾ. ಮಲ್ಲಿಕಾರ್ಜುನ್ ಹೂಗಾರ್, ಮುಖ್ಯ ಹಾಸ್ಟೆಲ್ ವಾರ್ಡನ್ ಡಾ. ಬಸವರಾಜ ಸೋಮನಮರಡಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಿಬ್ಬಂದಿ ಹಾಗೂ ವಿಶ್ವವಿದ್ಯಾಲಯದ 7 ವಿದ್ಯಾರ್ಥಿಗಳ ಮತ್ತು 5 ವಿದ್ಯಾರ್ಥಿನಿಯರ ವಸತಿ ನಿಲಯಗಳ ಹಾಸ್ಟೆಲ್ ಮೇಲ್ವಿಚಾರಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News