Kalaburagi | ಸಂಗೀತದಿಂದ ಮಾನಸಿಕ ಒತ್ತಡ ನಿವಾರಣೆ ಸಾಧ್ಯ: ಡಾ.ಕೆ.ಗಿರಿಮಲ್ಲ
ಕಲಬುರಗಿ, ಆ.8: ಸಂಗೀತವು ಮನಸ್ಸಿಗೆ ನೆಮ್ಮದಿ ನೀಡುವ ಅತ್ಯುತ್ತಮ ಕಲೆಯಾಗಿದ್ದು, ಅದನ್ನು ಆಲಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪರಿಚಯವೂ ಅತ್ಯವಶ್ಯಕವಾಗಿದೆ ಎಂದು ಸಾಹಿತಿ ಡಾ. ಕೆ. ಗಿರಿಮಲ್ಲ ಹೇಳಿದರು.
ನಗರದ ಸುಖಿ ಕಲಾಭವನದಲ್ಲಿ ರವಿವರ್ಮ ಕಲಾ ಸಾಹಿತ್ಯ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ “ಸುಮಧುರ ಸಂಗೀತ” ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಸಂತೋಷದಿಂದ ಹಾಗೂ ಆರೋಗ್ಯಕರ ಮನೋಭಾವದಿಂದ ಬೆಳೆಯಬೇಕಾದರೆ ಸಂಗೀತದೊಂದಿಗೆ ನಂಟು ಬೆಳೆಸಿಕೊಳ್ಳಬೇಕು. ಸಂಗೀತವು ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಡಾ. ಕೆ. ಗಿರಿಮಲ್ಲ ಅವರಿಗೆ “ಕಾಯಕ ರತ್ನ” ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವಿವರ್ಮ ಕಲಾ ಸಾಹಿತ್ಯ ಸಾಂಸ್ಕೃತಿಕ ಸೇವಾ ಸಂಸ್ಥೆಯ ಕಾರ್ಯದರ್ಶಿ ಶಿವಶಂಕರ್ ಬಿ. ವಹಿಸಿದ್ದರು. ಗುರು ಉಪದೇಶ ದಿನಪತ್ರಿಕೆಯ ಸಂಪಾದಕ ಗುಂಡೇರಾವ್, ಪರಮೇಶ್ವರ ಶಟಗಾರ್, ಮಲ್ಲಿನಾಥ ಪಾಟೀಲ ಮೇಳಕುಂದ, ಮರ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ನಾಗಭೂಷಣ ಅಗಸ್ತಿ, ಮುರುಗಪ್ಪ ಸೈನಿಕ, ಸಿದ್ದಣ್ಣಗುಡ್ಡ, ಕಾವೇರಿ ಜಿ. ಹಿರೇಮಠ ಹಾಗೂ ಅನ್ನಪೂರ್ಣ ಎನ್. ಚೌವ್ವಾಣ ಅವರು ಸುಮಧುರ ಗಾಯನದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.
ಸಂಗೀತ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ನಡೆದ ಕಾರ್ಯಕ್ರಮವು ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಯಿತು.