Kalaburagi | ಅಲರ್ಜಿ ರೋಗನಿರ್ಣಯಕ್ಕೆ ವೈದ್ಯಕೀಯ ಇತಿಹಾಸ ಪರಿಶೀಲನೆ ಅತ್ಯಗತ್ಯ: ಡಾ.ಗೌತಮ ಮೋದಿ
ಕಲಬುರಗಿ, ಆ.7: ಶ್ವಾಸಕೋಶದ ಅಲರ್ಜಿ, ಆಸ್ತಮಾ ಸೇರಿದಂತೆ ವಿವಿಧ ಅಲರ್ಜಿ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ರೋಗಿಯ ವೈದ್ಯಕೀಯ ಇತಿಹಾಸವನ್ನು ಸಮಗ್ರವಾಗಿ ಪರಿಶೀಲಿಸುವುದು ಹಾಗೂ ನಿಖರವಾದ ಅಲರ್ಜಿ ತಪಾಸಣೆ ನಡೆಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಎಫ್ಸಿಜಿಪಿ, ಎಫ್ಐಸಿಎಎಐ ಹಾಗೂ ಎಂಎನ್ಸಿಸಿಪಿ(ಐ) ತಜ್ಞ ವೈದ್ಯ ಡಾ. ಗೌತಮ ಮೋದಿ ಹೇಳಿದರು.
ನಗರದ ಕಲಬುರಗಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯ 10ನೇ ಮಹಡಿಯ ಸಭಾಂಗಣದಲ್ಲಿ ಜಿಮ್ಸ್ನ ಕಿವಿ, ಮೂಗು ಮತ್ತು ಗಂಟಲು (ಇಎನ್ಟಿ) ವಿಭಾಗ ಹಾಗೂ ಶ್ವಾಸಕೋಶ ವೈದ್ಯಕೀಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ “Allergy & Immunology Across Specialities: A Multidisciplinary Approach” ವಿಷಯದ ಒಂದು ದಿನದ ಬಹುಶಾಖಾ ವೈಜ್ಞಾನಿಕ ಕಾರ್ಯಾಗಾರದಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು.
ರೋಗನಿರ್ಣಯದಲ್ಲಿ ವೈದ್ಯರು ರೋಗಿಯ ಆರೋಗ್ಯ ಇತಿಹಾಸವನ್ನು ವಿವರವಾಗಿ ಆಲಿಸುವುದೇ ಶೇಕಡಾ 80ರಷ್ಟು ಯಶಸ್ಸಿಗೆ ಕಾರಣವಾಗುತ್ತದೆ. ರೋಗಲಕ್ಷಣಗಳು ಯಾವಾಗ ಮತ್ತು ಹೇಗೆ ಆರಂಭವಾಗಿವೆ ಎಂಬ ಮಾಹಿತಿ ಸರಿಯಾದ ಚಿಕಿತ್ಸೆಗೆ ಅತ್ಯಂತ ಸಹಕಾರಿಯಾಗುತ್ತದೆ. ಅಲರ್ಜಿ ಸಮಸ್ಯೆಯಿಂದ ಬಳಲುವವರಿಗೆ ಸಮಯೋಚಿತವಾಗಿ ಇಮ್ಯುನೊಥೆರಪಿ ಹಾಗೂ ಸೂಕ್ತ ಚಿಕಿತ್ಸೆ ನೀಡಿದರೆ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಔಷಧೀಯ ಅಲರ್ಜಿ ಸೇರಿದಂತೆ ವಿವಿಧ ರೀತಿಯ ಅಲರ್ಜಿ ಪ್ರಕರಣಗಳು ಹೆಚ್ಚುತ್ತಿವೆ. ಚಿಕಿತ್ಸೆ ಆರಂಭಿಸುವ ಮುನ್ನ ರೋಗಿಯ ಹಿಂದಿನ ಆರೋಗ್ಯ ಸಮಸ್ಯೆಗಳು, ಬಾಲ್ಯದ ಆಸ್ತಮಾ ಇತಿಹಾಸ ಹಾಗೂ ಇತರ ವೈದ್ಯಕೀಯ ಮಾಹಿತಿಯನ್ನು ಸಮಗ್ರವಾಗಿ ಪರಿಶೀಲಿಸುವುದು ಅಗತ್ಯವಾಗಿದೆ. ಅಲರ್ಜಿನ್ ಪ್ರೊವೊಕೇಶನ್ ಟೆಸ್ಟ್ ಮೂಲಕ ರೋಗಕಾರಕ ಅಂಶಗಳನ್ನು ನಿಖರವಾಗಿ ಗುರುತಿಸಿ ವೈಜ್ಞಾನಿಕ ಆಧಾರಿತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಶ್ವಾಸಕೋಶ ಹಾಗೂ ಉಸಿರಾಟದ ಅಲರ್ಜಿ ಪತ್ತೆಗೆ ಸ್ಕಿನ್ ಪ್ರಿಕ್ ಟೆಸ್ಟ್ ಅತ್ಯಂತ ವಿಶ್ವಾಸಾರ್ಹ ಹಾಗೂ ‘ಗೋಲ್ಡ್ ಸ್ಟ್ಯಾಂಡರ್ಡ್’ ಪರೀಕ್ಷೆಯಾಗಿದೆ. ಆಹಾರ ಅಲರ್ಜಿ ಪತ್ತೆಗೆ ಪ್ರಿಕ್-ಟು-ಪ್ರಿಕ್ ವಿಧಾನ ಪರಿಣಾಮಕಾರಿಯಾಗಿದ್ದು, ಕಾಂಪೊನೆಂಟ್ ರಿಸಾಲ್ವ್ಡ್ ಡಯಾಗ್ನೋಸಿಸ್ (CRD) ತಂತ್ರಜ್ಞಾನದಿಂದ ಅಲರ್ಜಿ ಉಂಟುಮಾಡುವ ಅಂಶಗಳನ್ನು ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗಿದೆ ಎಂದು ಹೇಳಿದರು.
ಕಾರ್ಯಾಗಾರವನ್ನು ಜಿಮ್ಸ್ ನಿರ್ದೇಶಕ ಡಾ. ಉಮೇಶ ಎಸ್.ಆರ್. ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಸಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಮೂಗಿನ ಅಲರ್ಜಿ, ಸೈನಸೈಟಿಸ್, ಆಸ್ತಮಾ, ಚರ್ಮದ ಅಲರ್ಜಿ, ಔಷಧೀಯ ಅಲರ್ಜಿ ಹಾಗೂ ಆಹಾರ ಅಲರ್ಜಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಲಿದ್ದು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಜಿಮ್ಸ್ ಇಎನ್ಟಿ ವಿಭಾಗದ ಮುಖ್ಯಸ್ಥೆ ಡಾ. ರೇಣುಕಾ ಎಸ್. ಮೇಳಕುಂದಿ ಮಾತನಾಡಿ, ಅಲರ್ಜಿ ಎನ್ನುವುದು ಕೇವಲ ಒಂದು ಅಂಗಕ್ಕೆ ಸೀಮಿತವಾಗಿರುವ ಸಮಸ್ಯೆಯಲ್ಲ. ಅದು ದೇಹದ ವಿವಿಧ ಅಂಗಗಳ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಸ್ಥಿತಿಯಾಗಿದ್ದು, ಪರಿಣಾಮಕಾರಿ ಚಿಕಿತ್ಸೆಗೆ ವಿವಿಧ ವಿಭಾಗಗಳ ವೈದ್ಯರು ಒಟ್ಟಾಗಿ ಕಾರ್ಯನಿರ್ವಹಿಸುವ ಬಹುಶಿಸ್ತೀಯ ವಿಧಾನ ಅಗತ್ಯವಾಗಿದೆ. ಇಂತಹ ವೈಜ್ಞಾನಿಕ ಕಾರ್ಯಾಗಾರಗಳು ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನವನ್ನು ಒದಗಿಸುತ್ತವೆ ಎಂದು ತಿಳಿಸಿದರು.
ಜಿಮ್ಸ್ ಶ್ವಾಸಕೋಶ ವೈದ್ಯಕೀಯ ವಿಭಾಗದ ಉಸ್ತುವಾರಿ ಮುಖ್ಯಸ್ಥೆ ಡಾ. ಎಸ್.ಎನ್. ಮಣಿದೇವಿ ಕರಂಪುಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಡಾ. ನರೇಂದ್ರ, ಡಾ. ರೇವಣಸಿದ್ದ, ಡಾ. ಶ್ರದ್ಧಾ ಪವಾರ್, ಡಾ. ಸಿದ್ಧರಾಮ ಪಾಟೀಲ್, ಡಾ. ರಾಮಚಂದ್ರ ಜೋಶಿ, ಡಾ. ಅನಮ್ ರಿಹಾ, ಡಾ. ವಾಸಿಮ್ ಪಟೇಲ್, ಡಾ. ಆಕಾಶ್ ಅಣದೂರೆ, ಡಾ. ಆನಂದ್, ಡಾ. ಹರ್ಷ, ಡಾ. ಅಶ್ಬಾ ಮಹೇಂದ್ರಕರ್ ಸೇರಿದಂತೆ ತಜ್ಞ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಇಂಟರ್ನ್ಗಳು ಹಾಗೂ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.