ವಾಡಿ | ಪರಿಸರ ಸಮತೋಲನಕ್ಕೆ ವೃಕ್ಷ ಪ್ರೇಮಿಗಳ ಸಂಖ್ಯೆ ಹೆಚ್ಚಬೇಕು : ಶರಣಗೌಡ ಪಾಟೀಲ ಚಾಮನೂರ

Update: 2026-08-07 19:38 IST

ವಾಡಿ : ಭೂಮಿಯ ಮೇಲಿನ ನೈಸರ್ಗಿಕ ಸಂಪತ್ತನ್ನು ಉಳಿಸಿ, ಪರಿಸರ ಸಮತೋಲನ ಕಾಪಾಡಬೇಕಾದರೆ ವೃಕ್ಷ ಪ್ರೇಮಿಗಳ ಸಂಖ್ಯೆ ಹೆಚ್ಚಾಗಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ ಹೇಳಿದರು.

ಪಟ್ಟಣದ ಶೈಕ್ಷಣಿಕ ಸಂಕೀರ್ಣದಲ್ಲಿ ಬೆಳಗಿನ ಬಳಗದ ವತಿಯಿಂದ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಡು-ಮರಗಳು ಸಮೃದ್ಧವಾಗಿದ್ದಾಗ ಮಾತ್ರ ಉತ್ತಮ ಮಳೆ, ಉತ್ತಮ ಬೆಳೆ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಹಿಂದೆ ಸರ್ಕಾರಿ ಶಾಲೆಗಳಲ್ಲಿ ಪರಿಸರ ಸಂರಕ್ಷಣೆ, ಕೈತೋಟಗಳ ಮಹತ್ವ ಹಾಗೂ ಗಿಡಮರಗಳ ಆರೈಕೆ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತಿತ್ತು. ಕೃಷಿ, ವನ ಸಂರಕ್ಷಣೆ ಹಾಗೂ ಔಷಧೀಯ ಸಸ್ಯಗಳ ಮಹತ್ವವನ್ನು ಮಕ್ಕಳಿಗೆ ಪರಿಚಯಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಪರಿಸರ ಶಿಕ್ಷಣ ಕಣ್ಮರೆಯಾಗುತ್ತಿರುವುದು ವಿಷಾದನೀಯ. ಶಾಲಾ ಹಂತದಲ್ಲಿಯೇ ಪರಿಸರ ಜಾಗೃತಿ ಮೂಡಿಸಿದಾಗ ಮಾತ್ರ ಮುಂದಿನ ಪೀಳಿಗೆಯಲ್ಲಿ ವೃಕ್ಷ ಪ್ರೇಮ ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಯೋಗ ಶಿಕ್ಷಕ ಮಲ್ಲಯ್ಯಸ್ವಾಮಿ ಮಠಪತಿ ಮಾತನಾಡಿ, ಅರಣ್ಯ ಪ್ರದೇಶಗಳು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿನ ಮರಗಳ ನಾಶದಿಂದ ಪರಿಸರ ಸಮತೋಲನ ಹದಗೆಡುತ್ತಿದ್ದು, ಅದರ ಪರಿಣಾಮ ಮಾನವ ಹಾಗೂ ಪ್ರಾಣಿ ಸಂಕುಲದ ಮೇಲೂ ಬೀಳುತ್ತಿದೆ. ಪ್ರತಿಯೊಬ್ಬರೂ ವರ್ಷಕ್ಕೊಂದು ಸಸಿ ನೆಟ್ಟು ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಳಗಿನ ಬಳಗದ ಜಯದೇವ ಜೋಗಿಕಲ್ ಮಠ, ಕಾಶೀನಾಥ ಶಟಗಾರ, ಭೀಮಶಾ ಜಿರೊಳ್ಳಿ, ಮಡಿವಾಳಪ್ಪ ಹೇರೂರ, ಬಸವರಾಜ ಕೇಶ್ವಾರ, ಭೀಮರಾವ ದೊರೆ, ಶ್ರೀನಾಥ ಇರಗೊಂಡ, ಭೀಮಣ್ಣ ಹವಾಲ್ದಾರ್, ಓಂಪ್ರಕಾಶ ಬಡಿಗೇರ, ದಯಾನಂದ ಖಜೂರಿ, ಮುಹಮ್ಮದ್‌ ಅಝೀಝ್‌ ತೇಲಿ, ಈರಣ್ಣ ಯಲಗಟ್ಟಿ, ಗುಂಡಪ್ಪ ಭಂಕೂರ, ಭೀಮಾ ನಾಟೇಕರ ಸೇರಿದಂತೆ ಹಲವರು ಭಾಗವಹಿಸಿ ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News