ಕಲಬುರಗಿ | 2 ಕೋಟಿ ವೆಚ್ಚದ ಶಾದಿ ಮಹಲ್‌ಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಅಡಿಗಲ್ಲು

Update: 2026-08-09 22:20 IST

ಕಲಬುರಗಿ: ನಗರದ ಹೊರವಲಯದಲ್ಲಿರುವ ಹಜರತ್ ಸೈಯ್ಯದ್ ರುಕ್ಮುದ್ದೀನ್ ತೋಲಾ ದರ್ಗಾ ಬಳಿ ಶಾದಿ ಮಹಲ್ ನಿರ್ಮಾಣಕ್ಕಾಗಿ 2 ಕೋಟಿ ವೆಚ್ಚದ ಯೋಜನೆಗೆ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್ ರವಿವಾರ ಅಡಿಗಲ್ಲು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಲ್ಲಂಪ್ರಭು ಪಾಟೀಲ್, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು, ಎಲ್ಲ ವರ್ಗದ ಜನರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಸಂಕಲ್ಪವಾಗಿದೆ. 2025-26ನೇ ಸಾಲಿನ ಅಭಿವೃದ್ಧಿ ಕಾಮಗಾರಿಗಳಡಿ ಶಾದಿ ಮಹಲ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ರುಕ್ಮುದ್ದೀನ್ ತೋಲಾ ಹಿಂದು–ಮುಸ್ಲಿಂ ಸಾಮರಸ್ಯದ ಪ್ರತೀಕವಾಗಿದೆ. ಇಲ್ಲಿ ಎರಡೂ ಸಮುದಾಯಗಳ ಭಕ್ತರು ಭೇಟಿ ನೀಡಿ ಪೂಜೆ ಹಾಗೂ ಸೇವೆ ಸಲ್ಲಿಸುತ್ತಾರೆ. ವಿಶೇಷವಾಗಿ ಹಿಂದೂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ದರ್ಗಾಕ್ಕೆ ಆಗಮಿಸಿ ಸೇವೆ ಸಲ್ಲಿಸುತ್ತಿರುವುದು ಈ ಕ್ಷೇತ್ರದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಚುನಾವಣೆಯ ಸಂದರ್ಭದಲ್ಲಿ ರುಕ್ಮುದ್ದೀನ್ ತೋಲಾ ಬಳಿ ಶಾದಿ ಮಹಲ್ ನಿರ್ಮಿಸುವ ಭರವಸೆ ನೀಡಿದ್ದೆ. ಇದೀಗ ನೀಡಿದ ಮಾತಿನಂತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರೊಂದಿಗೆ ಇಲ್ಲಿಗೆ ಆಗಮಿಸಿ ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿದ ಅವರು, ರುಕ್ಮುದ್ದೀನ್ ತೋಲಾ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಅನುದಾನ ಒದಗಿಸಲು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಣೇಶಪೀರ್ ದರ್ಗಾದ ಅನ್ವರ್ ಹುಸೇನ್ ಸಾಬ್, ಎಂಎಲ್‌ಸಿ ತಿಪ್ಪಣ್ಣ ಕಮಕನೂರ್, ಮುಖಂಡರಾದ ಇಳಿಯಾಸ್ ಸೇಠ್ ಭಾಗವಾನ್, ಪಾಲಿಕೆ ಸದಸ್ಯ ಅಲಂ ಪಟೇಲ್, ಸಂತೋಷ ಪಾಟೀಲ್ ದಣ್ಣೂರ, ಲಿಂಗರಾಜ, ಇರಫಾನ್ ಪಟೇಲ್, ಚಂದ್ರುಗೌಡ, ರವಿ ಪಾಟೀಲ್, ಎಪಿಎಂಸಿ ಸದಸ್ಯ ವೀರಣ್ಣ ಭಂಗೂರ್, ಲಾಡ್ಲೇಸಾಬ್, ಗಂಗಾಧರ, ಅಜೀಜ್ ಮಿಯಾ, ರಫೀಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News