ಕಲಬುರಗಿ | ದೇಹದ ಆರೋಗ್ಯಕ್ಕೆ ಪೋಷಕಾಂಶಯುಕ್ತ ಆಹಾರ ಮುಖ್ಯ : ಶೋಭಾದೇವಿ
ಕಲಬುರಗಿ : ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ದೇಹದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಕೆಬಿಎನ್ ಆಸ್ಪತ್ರೆಯ ಶೋಭಾದೇವಿ ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್.ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ವತಿಯಿಂದ ನಡೆದ ಆಹಾರ ಮತ್ತು ಪೌಷ್ಟಿಕಾಂಶ ಕುರಿತ ಮೌಲ್ಯವರ್ಧಿತ ತರಗತಿಯ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು ಮತ್ತು ಕೊಬ್ಬುಗಳು ದೇಹದ ಕಾರ್ಯಚಟುವಟಿಕೆಗೆ ಪ್ರಮುಖವಾಗಿವೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀನ್ಸ್ ಮತ್ತು ದ್ವಿದಳ ಧಾನ್ಯಗಳಿಂದ ಉತ್ತಮ ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್ಗಳನ್ನು ಪಡೆಯಬಹುದು. ಹಾಗಾಗಿ ಇವುಗಳನ್ನು ಆಹಾರಕ್ಕಾಗಿ ಬಳಸಿಕೊಳ್ಳಬಹುದು ಎಂದರು.
ಜೀವಸತ್ವಗಳು ಮತ್ತು ಖನಿಜಗಳು ದೇಹದಿಂದ ಉತ್ಪತ್ತಿಯಾಗುವುದಿಲ್ಲ, ಆಹಾರದ ಮೂಲಕ ಪಡೆಯಬೇಕು. ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಧಾನ್ಯಗಳಂತಹ ವಿವಿಧ ಆಹಾರಗಳಲ್ಲಿ ಇವು ಲಭ್ಯವಿವೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ರಾಜಶೇಖರ ಬೀರನಳ್ಳಿ ಮಾತನಾಡಿ, ಆರೋಗ್ಯವೆ ಸರ್ವಶ್ರೇಷ್ಠ ಭಾಗ್ಯವಾಗಿದ್ದು, ಮನುಷ್ಯ ಆರೋಗ್ಯ ಸರಿಯಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂದು ಹೇಳಿದರು.
ಸಮಾಜ ಶಾಸ್ತ್ರದ ಮುಖ್ಯಸ್ಥರು, ಕಾರ್ಯಕ್ರಮದ ಸಂಘಟಕರಾದ ಡಾ.ಮೈತ್ರಾದೇವಿ ಹಳಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮೀ ನಂದ್ಯಾಳ ಕಾರ್ಯಕ್ರಮ ನಿರೂಪಿಸಿದರು.