ಕಲಬುರಗಿ|ಆ.10ರಂದು ಬಸವೇಶ್ವರ ಆಸ್ಪತ್ರೆಯಲ್ಲಿ ವಿಕಲಚೇತನ ಮಕ್ಕಳಿಗೆ ವಿಶೇಷ ಆರೋಗ್ಯ ಶಿಬಿರ
ಕಲಬುರಗಿ: ಆಗಸ್ಟ್ 10ರಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆ, ಓ ಆರ್ ಡಿ ಐ(ಆರ್ಗನೈಜೇಷನ್ ಆಫ್ ರೇರ್ ಡಿಸಿಜ್ ಆಫ್ ಇಂಡಿಯಾ), ವಿಕಾಸ ಅಕಾಡೆಮಿ, ಮನಸ್ವಿನಿ ಹಾಗೂ ಪರಿವರ್ತನಾ ಮಂದಿರ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಕಲಚೇತನ ಮಕ್ಕಳಿಗಾಗಿ ವಿಶೇಷ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮಾಧ್ಯಮ ಸಂಯೋಜಕ ಐಕೆ ಪಾಟೀಲ್ ತಿಳಿಸಿದ್ದಾರೆ.
ಈ ವಿಶೇಷ ಶಿಬಿರವು ಸಂಪೂರ್ಣವಾಗಿ ಉಚಿತವಾಗಿದ್ದು, ಬಸವೇಶ್ವರ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಆಗಸ್ಟ್ 10ರಂದು ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿ ಸಾಯಂಕಾಲ 4 ಗಂಟೆಯವರೆಗೆ ನಡೆಯಲಿದೆ. ಈ ವಿಶೇಷ ಶಿಬಿರವನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ ಅವರು ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ.ಕೈಲಾಸ ಪಾಟೀಲ್, ಆಸ್ಪತ್ರೆಯ ಸಂಚಾಲಕರಾದ ಡಾ.ಕಿರಣ್ ದೇಶಮುಖ್ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕರಾದ ಡಾ.ಶರಣಬಸಪ್ಪ ಹರವಾಳ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿರಲಿದ್ದಾರೆ ಎಂದರು.
ಶಿಬಿರದ ನೇತೃತ್ವವನ್ನು ಮಕ್ಕಳ ತಜ್ಞರಾದ ಡಾ.ಅರುಂಧತಿ ಪಾಟೀಲ್ ವಹಿಸಲಿದ್ದು, ತಂಡದಲ್ಲಿ ನೇತ್ರ ತಜ್ಞರು, ಕಿವಿ ಮೂಗು ಗಂಟಲು ತಜ್ಞ ವೈದ್ಯರು, ಚರ್ಮ ರೋಗ ತಜ್ಞರು, ದಂತ ವೈದ್ಯರು, ಮೂಳೆ ರೋಗ ತಜ್ಞರು, ಫಿಸಿಯೋಥೆರಪಿ ವಿಭಾಗದವರು ಹಾಗೂ ಆಪ್ತ ಸಮಾಲೋಚಕರು ಭಾಗವಹಿಸಲಿದ್ದಾರೆ. ಇಂತಹ ವಿಶೇಷ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರಕಟನೆಯಲ್ಲಿ ಪಾಟೀಲ್ ತಿಳಿಸಿದ್ದಾರೆ.