ಕಲಬುರಗಿ | ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ : ಉನ್ನತ ತನಿಖೆಗೆ ವಿವಿಧ ಸಂಘಟನೆಗಳಿಂದ ಆಗ್ರಹ
ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿ ಸಮೀಪದಲ್ಲಿರುವ ಕೇಂದ್ರೀಯ ವಿವಿಯಲ್ಲಿ ಭೂಗರ್ಭಶಾಸ್ತ್ರ ಪದವಿ ಓದುತ್ತಿದ್ದ ಜಯಶ್ರೀ ನಾಯಕ್ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ವಿವಿಯ ಮುಂಭಾಗ ಪ್ರತಿಭಟಿಸಿ, ಕುಲಸಚಿವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಜನವಾದಿ ಮಹಿಳಾ ಸಂಘಟನೆ, ಎಸ್ಎಫ್ಐ, ಡಿವೈಎಫ್ಐ, ದಲಿತ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಪಕುಲಪತಿಗಳೇ ಖುದ್ದಾಗಿ ಬಂದು ನಮ್ಮ ಮನವಿ ಸ್ವೀಕರಿಸಬೇಕು ಎಂದು ಹೇಳಿದಾಗ ಹೋರಾಟಗಾರರ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಮಧ್ಯೆ ವಿವಿಯ ಕೆಲ ವಿದ್ಯಾರ್ಥಿಗಳು ಪ್ರತಿಭಟನೆಗೆ ಅಡ್ಡಿಪಡಿಸುವಂತಹ ಘಟನೆ ನಡೆದಾಗ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಶಿಕ್ಷಕರೇ ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ಜಯಶ್ರೀಯು ಅವಳ ಅಳಲನ್ನು ಬಸವರಾಜ ಕೂಬಕಡ್ಡಿ ಅವರ ಎದುರು ತೊಡಿಕೊಂಡಿದ್ದಾಳೆ, ಆದರೆ ಅವಳ ಸಮಸ್ಯೆಯನ್ನು ಸರಿಯಾಗಿ ಕೇಳದೆ ಇರುವುದು ಮತ್ತು ಅವಳ ಸಾವು ಇಡೀ ಶಿಕ್ಷಕ ವೃಂದಕ್ಕೆ ಅವಮಾನಕರವಾಗಿದೆ ಎಂದು ಹೇಳಿದರು.
ಕೇಂದ್ರೀಯ ವಿವಿಯು ಆರೆಸ್ಸೆಸ್ ಅಡ್ಡೆಯಾಗಿಬಿಟ್ಟಿದೆ. ವಿವಿ ಆವರಣದಲ್ಲಿ ಹೋಮ ಹವನ, ಮತ್ತಿತರ ಚಟುವಟಿಕೆಗಳು ನಡೆಯುತ್ತಿವೆ, ಆತ್ಮಹತ್ಯೆ ಪ್ರಕರಣ ದಿಕ್ಕುತಪ್ಪಿಸಲು ಉದ್ದೇಶಪೂರ್ವಕವಾಗಿ ಕೆಲ ಮಾಧ್ಯಮಗಳು ವಿವಿ ಆವರಣದಲ್ಲಿ ರಾತ್ರೋ ರಾತ್ರಿ ಮಝಾರ್ ಪ್ರತ್ಯಕ್ಷ ಆಗಿವೆ ಎಂದು ಸುಳ್ಳು ಸುದ್ದಿ ಹಬ್ಬಿಸಿವೆ. ಗೇಟಿನ ಹೊರಗಡೆ ಮನವಿ ಪತ್ರ ಕೊಡುತ್ತೇವೆ ಎಂದರೂ ಒಳಗಡೆ ಬಿಡಲ್ಲ, ಮಾಧ್ಯಮಗಳು ವಿವಿ ಆವರಣ ಪ್ರವೇಶಿಸಿ ಸುಳ್ಳು ಸುದ್ದಿ ಹೇಗೆ ಪ್ರಸಾರ ಮಾಡಿದವು ಎಂದು ವಿವಿಯ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯಾ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ವಿದ್ಯಾರ್ಥಿನಿಯ ಸಾವಿನ ಪ್ರಕರಣವು ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು, ಪ್ರಕರಣದಲ್ಲಿ ಕುಲಪತಿ, ಕುಲಸಚಿವ ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿಗೂ ಸಹ ವಿಚಾರಣೆ ನಡೆಸಬೇಕು, ಇಂತಹ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ವಿವಿ ಕುಲಪತಿ ಕೂಡಲೇ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಡಿವೈಎಫ್ಐ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್, ಸುಜಾತಾ ವೈ, ಪಾಂಡುರಂಗ ಮಾವಿನಕರ ಸೇರಿದಂತೆ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಗುಡ್ಡೆ, ಪದ್ಮಿನಿ ಕಿರಣಗಿ, ಲವಿತ್ರ ವಸ್ತ್ರದ್, ಸಲ್ಮಾನ್ ಖಾನ್ ದೆವಂತಗಿ, ಡಾ.ಪ್ರಭು ಖಾನಾಪುರೆ, ಪ್ರಮೋದ ಪಾಂಚಾಳ, ವಿಜಯಲಕ್ಷ್ಮಿ ಗಡ್ಡೆ, ಚಂದಮ್ಮ ಗೋಳಾ, ಭೀಮಾಶಂಕರ ಮಾಡಿಯಾಳ, ಮೌಲಾ ಮುಲ್ಲಾ, ಮಹೇಶ್ ಕುಮಾರ್ ರಾಥೋಡ್, ಸರ್ವೇಶ್ ಮಾವಿನಕರ, ಶಾಂತಾ ಸರಡಗಿ, ಸಾಜಿದ್, ಮಲ್ಲಿಕಾರ್ಜುನ್ ಶೃಂಗೇರಿ ಸೇರಿದಂತೆ ಮುಂತಾದವರು ಇದ್ದರು.