ಕಾಳಗಿ : ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವ ರೇವಗ್ಗಿ(ರಟಕಲ್‌) ರೇವಣಸಿದ್ದೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವವು ಶ್ರಾವಣ ಮಾಸದ ನಡುವಿನ ಸೋಮವಾರ ಸಂಜೆ ಸಂಭ್ರಮದಿಂದ ಜರುಗಿತು.

ಪ್ರತಿ ವರ್ಷದ ಸಾಂಪ್ರದಾಯದಂತೆ ಶ್ರಾವಣ ಮಾಸದ ನಡುವಿನ ಸೋಮವಾರದಂದು ನಸುಕಿನ ಜಾವ 3ಗಂಟೆಗೆ ರೇವಣಸಿದ್ದೇಶ್ವರ ಮೂರ್ತಿಗೆ ಕಾಕಡಾರತಿ, 4ಕ್ಕೆ ರೇವಣಸಿದ್ದೇಶ್ವರ ತಪೋ ಗದ್ದುಗೆಗೆ ಸಹಸ್ರ ಬಿಲ್ವಾರ್ಚನೆ, ಮಹಾಪೂಜೆ, ಮಹಾಮಂಗಳಾರುತಿ ಜರುಗಿದವು. ನಂತರ ಸುತ್ತಲಿನ ಗ್ರಾಮಗಳಾದ ಬೆಡಸೂರ, ರೇವಗ್ಗಿ, ರಟಕಲ, ಮುಕರಂಬಾ, ಕಂದಗೂಳ, ಮಾವಿನಸೂರ, ಗೊಣಗಿ ಭಕ್ತರು ಚನ್ನಬಸವ ದೇವರ ಮನೆಯಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ದೇಸ್ಥಾನಕ್ಕೆ ಬಂದು ತಲುಪಿತು. ಬಳಿಕ ರಟಕಲ್ ಗ್ರಾಮದಿಂದ ಭಜನೆ ತಂಡ ಬರುತ್ತಿದ್ದಂತೆ ರೇವಣಸಿದ್ದನ ಉತ್ಸವ ಮೂರ್ತಿಗೆ ಮಹಾಮಂಗಳಾರತಿ ಸಲ್ಲಿಸಿ ಅಲಂಕೃತ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ರೇವಣಸಿದ್ದೇಶ್ವರ ಗುಡ್ಡದಲ್ಲಿ ಅಲಂಕೃತ ಬೆಳ್ಳಿ ಪಲಕ್ಕಿ ಉತ್ಸವವು ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ದೇವಸ್ಥಾನ ಪ್ರದಕ್ಷಿಣೆ ಹಾಕಿತು. ಭಕ್ತರು ಯಘೋಷಗಳನ್ನು ಕೂಗುತ್ತ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಉತ್ತುತ್ತಿ, ಬಾದಮಿ, ಬಾಳೆಹಣ್ಣು, ನಾಣ್ಯ, ತೆಂಗಿನಕಾಯಿ, ಫಲಪುಷ್ಪಗಳನ್ನು ಎಸೆದು ಭಕ್ತಿ ಮೆರೆದರು.

ಜಾತ್ರೆಗೆ ಬಂದ ಭಕ್ತರಿಗೆ ಸಾರಿಗೆ, ಕುಡಿಯುವ ನೀರು, ಆರೋಗ್ಯ, ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಂದಗೂಳ ಕ್ರಾಸ್, ಅರಣಕಲ್, ಭೆಡಸೂರ, ಮಾವಿನಸೂರ ರಸ್ತೆ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು.

ರಟಕಲ್‌ ಪೂಜ್ಯ ನೀಲಕಂಠ ಮಹಾಸ್ವಾಮಿಗಳು, ಸೇಡಂ ಸಹಾಯಕ ಆಯುಕ್ತ ಮತ್ತು ದೇವಾಸ್ಥಾನ ಸಮಿತಿ ಅಧ್ಯಕ್ಷ ಪ್ರಭುರೆಡ್ಡಿ, ಸೇಡಂ ತಹಶಿಲ್ದಾರ ನಾಗನಾಥ ತರಗೆ, ದೇವಸ್ಥಾನ ಕಾರ್ಯದರ್ಶಿ ಸದಾಶಿವ ವಗ್ಗೆ, ಚನ್ನಬಸಪ್ಪ ದೇವರಮನಿ, ಗಂಗಾಧರ ಸ್ವಾಮಿ, ಶಿವಾರಾಜ ಪಾಟೀಲ ಗೋಣಗಿ, ವೀರಣ್ಣ ಗಂಗಾಣಿ ಸೇರಿದಂತೆ ಸಹಸ್ರಾರು ಭಕ್ತರು ಇದ್ದರು.

ಶಹಾಬಾದ್‌ ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಸಿಪಿಐ ಜಗದೇವಪ್ಪ ಪಾಳ, ಕಾಳಗಿ ಪಿಎಸ್ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ ಪೊಲಿಸ್ ಬಂದೋಬಸ್ತ್ ಕಲ್ಪಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor