ಶಹಾಬಾದ: ರಾಜ್ಯ ಸರಕಾರವು ವಯೋವೃದ್ಧರ, ವಿಧವೆಯರ, ವಿಕಲಚೇತನರ ಹಾಗೂ ಮಂಗಳಮುಖಿಯರ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಕಳೆದ ಐದು ತಿಂಗಳಿನಿಂದ ಸಮರ್ಪಕವಾಗಿ ವಿತರಿಸದೆ, ಅವರ ಜೀವನದಲ್ಲಿ ಅಭದ್ರತೆ ಸೃಷ್ಠಿಸುತ್ತಿದೆ ಎಂದು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಕಲಬುರಗಿ ಜಿಲ್ಲಾ ಸಮಿತಿಯ ಕಾರ್ಯದರ್ಶಿಗಳಾದ ವೀರಭದ್ರಪ್ಪ ಆರ್.ಕೆ. ಅವರು ಆಕ್ರೋಶ ವ್ಯಕ್ತಪಡಿಸಿದರು.

ಅವರು ಸ್ಥಗಿತಗೊಂಡಿರುವ ಪಿಂಚಣಿ ಸಮಸ್ಯೆಯನ್ನು ಪರಿಹಾರಿಸಬೇಕೆಂದು ಒತ್ತಾಯಿಸಿ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯ ನೇತೃತ್ವದಲ್ಲಿ ಶಹಾಬಾದನ ತಹಶೀಲ್ದಾರ ಕಛೇರಿ ಎದುರು ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು, ದುರ್ಬಲ ಮತ್ತು ಅಸಹಾಯಕ ವರ್ಗಗಳಾದ ವೃದ್ಧರು, ವಿಧವೆಯರು, ವಿಕಲಚೇತನರು, ಅವಿವಾಹಿತ ಮಹಿಳೆಯರು, ತೃತೀಯ ಲಿಂಗಿಗಳಿಗೆ ಮತ್ತಿತರರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಎಷ್ಟೋ ವರ್ಷಗಳಿಂದ ಮಾಸಿಕ ಪಿಂಚಣಿಯನ್ನು ನೀಡಲಾಗುತ್ತಿತ್ತು. ಬಹುತೇಕ ಪಿಂಚಣಿದಾರರು ಇದನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಬಡಕುಟುಂಬಗಳ ವೃದ್ಧರಂತೂ ತಮ್ಮ ಆಸ್ಪತ್ರೆ ಮತ್ತು ಔಷಧ ಖರ್ಚುಗಳಿಗೆ ಪಿಂಚಣಿಯನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆ. ಈಗ ಏಕಾಏಕಿ ರಾಜ್ಯ ಸರ್ಕಾರ, ಪಿಂಚಣಿ ಪಡೆಯುತ್ತಿರುವವರಲ್ಲಿ ಲಕ್ಷಾಂತರ ಅನರ್ಹ ವ್ಯಕ್ತಿಗಳು ಪತ್ತೆಯಾಗಿದ್ದಾರೆ. ಹಾಗಾಗಿ ಎಲ್ಲಾ ಫಲಾನುಭವಿಗಳ ದಾಖಲಾತಿಗಳನ್ನು ಮರುಪರಿಶೀಲನೆ ಮಾಡಬೇಕು ಎಂಬ ನೆಪವೊಡ್ಡಿ ಐದು ತಿಂಗಳುಗಳಿಂದ ಪಿಂಚಣಿಯನ್ನು ಸ್ಥಗಿತಗೊಳಿಸಿದೆ. ಶಹಾಬಾದ ತಾಲೂಕಿನಲ್ಲಿ 6000 ಕ್ಕಿಂತ ಹೆಚ್ಚಿನ ಜನರು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಆದಷ್ಟು ಬೇಗನೆ ಸರಕಾರವು ಪಿಂಚಣಿಯ ಈ ಸಮಸ್ಯೆಯನ್ನು ಪರಿಹರಿಸದಿದ್ದರೆ, ಉನ್ನತ ಹಂತದ ಹೋರಾಟವನ್ನು ಮಾಡಕಾಗುತ್ತದೆ ಎಂದು ಎಚ್ಚರಿಸಿದರು.

ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ರಾಮಣ್ಣ ಎಸ್. ಇಬ್ರಾಹಿಂಪೂರ ಅವರು ಮಾತನಾಡುತ್ತ, ದಾಖಲೆಗಳ ಹೆಸರಿನಲ್ಲಿ ಸರ್ಕಾರಿ ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವು ಬಡಜನರನ್ನು ಈ ರೀತಿ ಬಲಿಕೊಡುವುದು ಯಾವ ನ್ಯಾಯ? ಎಂದು ಪ್ರಶ್ನಿಸುತ್ತಾ, ಒಂದೆಡೆ, ದಾಖಲೆಗಳನ್ನು ನೀಡಬೇಕಾದ ಕಂದಾಯ ಇಲಾಖೆಯ ಅಧಿಕಾರಿಗಳು ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದರು. ಇನ್ನೊಂದೆಡೆ, ವಯಸ್ಸಾದ ಜನ ದಿನನಿತ್ಯ ತಾಲೂಕು ಕಚೇರಿಗಳ ಮುಂದೆ ಬೆಳಗ್ಗೆ ಐದು ಗಂಟೆಯಿಂದಲೇ ಕ್ಯೂನಲ್ಲಿ ನಿಂತರೂ ಕೆಲಸವಾಗದೇ ಕಂಗಾಲಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಕಛೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಕಠಿಣಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಶಹಾಬಾದ ಸ್ಥಳೀಯ ಕಾರ್ಯದರ್ಶಿಗಳಾದ ಗಣಪತ್ ರಾವ ಕೆ. ಮಾನೆ ಅವರು, ಉದ್ಯಮಿಗಳಿಗೆ, ಹೂಡಿಕೆದಾರರಿಗೆ ಕೋಟಿಗಟ್ಟಲೆ ವಿನಾಯಿತಿ ನೀಡುವ ಸರ್ಕಾರ, ಬಡವರಿಗೆ ನೀಡುವ ಜುಜುಬಿ ಹಣಕ್ಕೂ ನೂರೆಂಟು ನಿಯಮಗಳನ್ನು ಹೇರುತ್ತಿದೆ. ವಿವಿಧ ರೀತಿಯ ಪ್ರಮಾಣಪತ್ರಗಳಿಗಾಗಿ ಅಸಹಾಯಕ, ವಯೋವೃದ್ಧ ಮಹಿಳೆಯರನ್ನು ಕಛೇರಿಗಳಿಗೆ ಅಲೆಯುವಂತೆ ಮಾಡಿರುವ ಸರಕಾರಕ್ಕೆ ಧಿಕ್ಕಾರ ಎಂದು ಹೇಳುತ್ತಾ, ಈ ಕೂಡಲೇ ಸ್ಥಗಿತಗೊಂಡಿರುವ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಪುನರಾರಂಭಿಸಬೇಕೆಂದು ಆಗ್ರಹಿಸಿದರು.

ಪಕ್ಷದ ಸ್ಥಳೀಯ ಸಮಿತಿಯ ಸದಸ್ಯರಾದ ಗುಂಡಮ್ಮ ಮಡಿವಾಳ ಸರ್ಕಾರವು ಪಿಂಚಣಿ ಮರುಪರುಶೀಲನಾ ಕಾರ್ಯಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕಾಗಿದೆ. ವೃದ್ಧರನ್ನು, ವಿಕಲಚೇತನರನ್ನು ಮತ್ತೆ ಮತ್ತೆ ಕಚೇರಿಗಳಿಗೆ ಅಲೆಯುವಂತೆ ಮಾಡದೆ, ಅವರ ಹಳ್ಳಿಗಳಲ್ಲಿ ಮತ್ತು ವಾರ್ಡಗಳಲಿಯೇ, ಮನೆಬಾಗಿಲಿಗೆ ಆಗತ್ಯ ದಾಖಲೆಗಳು ದೊರಕುವಂತೆ ಮಾಡಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.

ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯು ಸದಸ್ಯರಾದ ಜಗನ್ನಾಥ ಎಸ್.ಎಚ್. ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಜನಸಾಮಾನ್ಯರಿಗೆ ಅಲ್ಪಮಟ್ಟದಲ್ಲಿ ಸಹಾಯವಾಗುತ್ತಿದ್ದ ಪಿಂಚಣಿಯನ್ನು ಏಕಾಏಕಿ ಸ್ಥಗಿತ ಮಾಡಿರುವುದು ಜನವಿರೋಧಿ ನೀತಿಯಾಗಿದೆ. ಪಿಂಚಣಿ ಮಂಜೂರಾತಿಗಾಗಿ ಪ್ರಮಾಣಪತ್ರಗಳನ್ನು ನೀಡುವುದು ಹಾಗೂ ಪಡೆಯುವುದು ಸರಕಾರದ ಜವಾಬ್ದಾರಿಯಾಗಿದೆ. ತಾನೇ ನೀಡಿರುವ ಪ್ರಮಾಣಪತ್ರಗಳ ಬಗ್ಗೆ ಸಂಶಯಾಸ್ಪದ ಎಂದು ಹೇಳಿದ್ದು ನೋಡಿದರೆ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳುತ್ತ, ತಡೆ ಹಿಡಿದಿರುವ ಪಿಂಚಣಿಯನ್ನು ಮೊದಲು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ನಾಯಕರಾದ ರಾಘವೇಂದ್ರ. ಎಮ್.ಜಿ, ರಾಜೇಂದ್ರ ಆತ್ನೂರ್ ಭಾಗಣ್ಣ ಬುಕ್ಕ, ನೀಲಕಂಠ ಹುಲಿ, ರಘು ಪವಾರ, ಮಹಾದೇವಿ ಮಾನೆ, ಸಿದ್ದು ಚೌಧರಿ, ದೇವರಾಜ ಮಿರಲಕರ್, ತಿಮ್ಮಣ್ಣ ಮಾನೆ, ರಾಧಿಕ ಚೌಧರಿ, ಮಹಾದೇವಿ ಆತ್ನೂರ್, ತೇಜಸ್ ಇಬ್ರಾಹಿಂಪೂರ್, ಸ್ಫೂರ್ತಿ ಗುರಜಾಲಕರ್, ಬಾಬು ಪವಾರ, ಅಜಯ, ದೇವರಾಜ ರಂಜೋಳ್, ಕಿರಣ ಮಾನೆ ಹಾಗೂ ನೂರಾರು ಜನ ಮಹಿಳೆಯರು, ವಯೋವೃದ್ಧರು, ಜನಸಾಮಾನ್ಯರು ಭಾಗವಹಿಸಿದರು.



 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor