×
Ad

ಪೊಲೀಸರು ಎಂದರೆ ಭಯವಲ್ಲ, ನೊಂದವರ ಭರವಸೆ: ಡಾ.ಶರಣಪ್ಪ ಎಸ್.ಡಿ

Update: 2026-01-20 19:02 IST

ಕಲಬುರಗಿ: ಪೊಲೀಸರು ಎಂದರೆ ಭಯವಲ್ಲ, ಅದು ನೊಂದವರ ಭರವಸೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ಹೇಳಿದರು.

ನಗರದ ಕನ್ನಡಭವನದಲ್ಲಿ ಜಮಾದಾರ್ ಕುಟುಂಬ ಪ್ರತಿಷ್ಠಾನ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ  "ಬೆಸ್ಟ್ ಪೊಲೀಸ್ ಪ್ರಶಸ್ತಿ", ಮೆಟ್ರಿಕ್ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪೊಲೀಸ್ ಕುಟುಂಬದ ಮಕ್ಕಳಿಗೆ ವಿಶೇಷ ಸನ್ಮಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿ ಮಾತನಾಡಿದ ಡಾ.ಶರಣಪ್ಪ ಎಸ್.ಡಿ, ಕಳೆದ ಏಳೂವರೆ ದಶಕದಲ್ಲಿ ಪೊಲೀಸ್ ಇಲಾಖೆಯು ಬಹಳಷ್ಟು ಬದಲಾವಣೆಯೊಂದಿಗೆ ಕೆಲಸ ಮಾಡುತ್ತಿದೆ. ಅದರಂತೆಯೇ ಪತ್ರಿಕೋದ್ಯಮ ಎಂದರೂ ಒಂದು ಕಾಲದಲ್ಲಿ ಭಯ ಇತ್ತು. ಇಂದು ಅದು ಕೂಡ ಅಭಿವೃದ್ಧಿಯ ವಿಷಯ, ಸಮಾಜದಲ್ಲಿ ಸಮಾನತೆ ರೂಪಿಸುವಲ್ಲಿ ಮಾಧ್ಯಮ ಕೆಲಸ ಮಾಡಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯೆ ಕೊಡುವ ಶಿಕ್ಷಕರನ್ನು, ಹಿರಿಯರನ್ನು ಗೌರವಿಸುವುದು ಸೇರಿದಂತೆ ಹಲವು ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತರಿಸಬೇಕಿದೆ, ಮಕ್ಕಳನ್ನು ಕೇವಲ ಕುಟುಂಬದ ಆಸ್ತಿಯನ್ನು ಮಾಡದೆ ದೇಶದ ಆಸ್ತಿಯನ್ನಾಗಿ ಮಾಡಬೇಕು, ಅಂದಾಗ ಮಾತ್ರ ಮಕ್ಕಳ ಹಾಗೂ ಕುಟುಂಬದ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಟಿ ಪೋತೆ, ಸಮಾಜಕ್ಕೆ ಪೂರಕವಾಗಿ ಬೆಳೆಯುವಂತಹ ಕನಸುಗಳಿರಬೇಕು. ಡಾ.ಅಂಬೇಡ್ಕರ್ ದೊಡ್ಡ ವ್ಯಕ್ತಿಗಳಾದರು. ಆದರೆ ಎಲ್ಲರೂ ಅಂಬೇಡ್ಕರ್ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತ ಪ್ರಭುಲಿಂಗ ನೀಲೂರೆ, ಹನುಮಂತರಾವ್ ಬೈರಾಮಡಗಿ, ಗುರುರಾಜ್ ಕುಲಕರ್ಣಿ, ಅಶೋಕ್ ದೊಡ್ಡಮನಿ, ಗೀತಾ ಹೊಸಮನಿ, ಮಲ್ಲಿಕಾರ್ಜುನ್ ಬೀರನೂರ್, ಭೀಮರಾವ್ ಜಾಧವ್ ಅವರಿಗೆ ಗೌರವ ಸನ್ಮಾನ ಮಾಡಲಾಯಿತು. ಇದೇ ವೇಳೆಯಲ್ಲಿ ಮೆಟ್ರಿಕ್ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪೊಲೀಸ್ ಕುಟುಂಬದ ಮಕ್ಕಳಿಗೆ ವಿಶೇಷ ಸನ್ಮಾನ ಮಾಡಲಾಯಿತು.

ಮಹಾನಗರ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಅನುಪಮಾ ರಮೇಶ್, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಶಿವಕುಮಾರ್ ಹೊನಗುಂಟಿ, ಪತ್ರಕರ್ತರಾದ ಡಾ. ಶಿವರಂಜನ್ ಸತ್ಯಂಪೇಟೆ, ಬಾಬುರಾವ್ ಯಡ್ರಾಮಿ, ಚಂದ್ರಶೇಖರ್ ಕವಲಗಾ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ರಮೇಶ ಜಮಾದಾರ್‌, ಸಂಜೀವಕುಮಾರ್‌ ಕಾಂಬಳೆ, ಪಂಚಾಕ್ಷರಿ ಜಮಾದಾರ್‌, ಶರಣಗೌಡ ಪಾಟೀಲ್, ಸುಭಾಷ್‌ ಆಲೂರ್‌, ನಾಗಶೆಟ್ಟಿ ಡಾಕುಳಗಿ, ಪ್ರಕಾಶ ಉಡಚಣ, ಮಲ್ಲಣ್ಣ ಯಂಕoಚಿ, ಸುರೇಶ್‌ ಲೇಂಗಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಪತ್ರಕರ್ತ ಸೂರ್ಯಕಾಂತ್ ಜಮಾದಾರ್ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ. ಎಂ ಪಾಟೀಲ್ ಪ್ರಾರ್ಥನೆ ಗೀತೆ ಹಾಡಿದರು. ಶಿವಾನಂದ ಅಣಜಗಿ ನಿರೂಪಿಸಿದರು.

ಈ ವೇಳೆ ಎಸಿಪಿ ಶಿವನಗೌಡ ಪಾಟೀಲ್, ಪಿಎಸ್ಐ ಶಿವಲಿಂಗಪ್ಪ ಉಮ್ಮನಗೋಳ್, ಪಿಎಸ್ಐ ಭಾರತಿಬಾಯಿ ಧನ್ನಿ, ಸಂತೋಷಮ್ಮ ತಳವಾರ್, ಮಲ್ಲಣ್ಣ ಮಾಲಿಪಾಟೀಲ್, ಎಎಸ್ಐ ಚಂದ್ರಾಮಪ್ಪ ಕುಂಬಾರ್, ಷಣ್ಮುಖ ಪಂಡಿತ್ ಮಾಂಡುವೆ, ಮಶಾಕ್ ನದಾಫ್, ಸಂತೋಷ್ ಎಸ್ ನಾಯ್ಕೋಡಿ, ಹಾಗೂ ಗಡ್ಡೆಪ್ಪ ಕೋರಿ ಅವರಿಗೆ "ಬೆಸ್ಟ್ ಪೊಲೀಸ್ ಪ್ರಶಸ್ತಿ" ನೀಡಿ ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News