ಚಿತ್ತಾಪುರ ಕ್ಷೇತ್ರದ 87 ಹಳ್ಳಿಗಳ ಅಭಿವೃದ್ಧಿಗೆ ನೀಲಿ ನಕ್ಷೆ ಸಿದ್ಧ,150 ಕೋಟಿ ರೂ. ವೆಚ್ಚದಲ್ಲಿ ಗ್ರಾಮಾಭಿವೃದ್ಧಿ: ಪ್ರಿಯಾಂಕ್ ಖರ್ಗೆ
ಕಲಬುರಗಿ: ಚಿತ್ತಾಪುರ ಕ್ಷೇತ್ರದಾದ್ಯಂತ ರಾಜ್ಯದಲ್ಲಿಯೇ ಮಾದರಿಯಾಗಿ 150 ಕೋಟಿ ರೂ. ವೆಚ್ಚದಲ್ಲಿ 87 ಹಳ್ಳಿಗಳ ಗ್ರಾಮಾಭಿವೃದ್ಧಿಗೆ ನೀಲಿ ನಕ್ಷೆ ಸಿದ್ದಪಡಿಸಿದ್ದು, ಇನ್ನು 15 ದಿನದಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮಂಗಳವಾರ ಚಿತ್ತಾಪುರ ಪಟ್ಟಣದಲ್ಲಿ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಕಾಗಿಣಾ ನದಿ ಮೂಲದಿಂದ 45.53 ಕೋಟಿ ರೂ. ವೆಚ್ಚದಲ್ಲಿ ಚಿತ್ತಾಪುರ ಪಟ್ಟಣಕ್ಕೆ ಸುಧಾರಿತ ಕುಡಿಯುವ ನೀರು ಯೋಜನೆ ಮತ್ತು 32.81ಕೋಟಿ ರೂ. ವೆಚ್ಚದಲ್ಲಿ ಭೀಮಾ ನದಿ ಮೂಲದಿಂದ ವಾಡಿ ಪಟ್ಟಣಕ್ಕೆ ಸುಧಾರಿತ ಕುಡಿಯುವ ನೀರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಷ್ಠಿತ ಸಂಸ್ಥೆಗಳಿಂದ ಹಳ್ಳಿ ಬದುಕು ಹಸನಗೊಳಿಸಲು ಸಂಪೂರ್ಣ ಗ್ರಾಮಾಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಜನಸಂಖ್ಯೆ ಅನುಗುಣವಾಗಿ ಪ್ರತಿ ಹಳ್ಳಿಗೆ 1 ರಿಂದ 3.50 ಕೋಟಿ ರೂ. ಅನುದಾನ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನೀಡಲಾಗುವುದು. ಇದರ ಜೊತೆಗೆ ವಾಡಿ ಮತ್ತು ಚಿತ್ತಾಪುರ ಪಟ್ಟಣ ಸಹ ತಲಾ 150 ಕೋಟಿ ರೂ. ವೆಚ್ಚದಲ್ಲಿ ಅಧುನಿಕ ಮೂಲಸೌಕರ್ಯ ಕಲ್ಪಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದ ಸಚಿವರು, ರಾಜ್ಯಾದ್ಯಂತ ಪ್ರಗತಿ ಪಥ ಮತ್ತು ಕಲ್ಯಾಣ ಪಥ ಯೋಜನೆಯಡಿ 8,260 ಕಿ.ಮೀ ಹಳ್ಳಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. 5,770 ಅರಿವು ಕೇಂದ್ರಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಯುವಕ ಯುವತಿಯರಿಗಾಗಿ ಜ್ಞಾನಾರ್ಜನೆ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಅರಿವು ಕೇಂದ್ರಗಳನ್ನು ಮುಂದಿನ 3 ವರ್ಷದಲ್ಲಿ ಡಿಜಿಟಲೀಕರಣ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಈ ಸಲ ಗ್ರಾಮ ಪಂಚಾಯತಿಗಳಿಂದ ಒಟ್ಟು 1,281 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದು ದಾಖಲೆಯ ಕರ ಸಂಗ್ರಹ. ನರೇಗಾ ಯೋಜನೆಯಡಿಯಲ್ಲಿ ತಾಯಂದಿರು ಕೆಲಸ ಮಾಡಲು ಹೋದಾಗ ಅವರ ಮಕ್ಕಳನ್ನು ಬಿಟ್ಟು ಹೋಗಲು 3,867 ಕೂಸಿನ ಮನೆ ಗಳನ್ನು ಸ್ಥಾಪಿಸಲಾಗಿದ್ದು ಅಲ್ಲಿ ಸುಮಾರು 50,000 ಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ. ತಾಲೂಕಿನ ಗುಂಡಗುರ್ತಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸುವ ಸೊಲಾರ ಗ್ರಿಡ್ ಸ್ಥಾಪಿಸಲಾಗುತ್ತಿದೆ. ಇದರಿಂದ ಗ್ರಾಮಗಳು ಸ್ವಂತ ವಿದ್ಯುತ್ ಉತ್ಪಾದಿಸಲಿವೆ ಎಂದರು.
ಇಂದಿಲ್ಲಿ ಸುಮಾರು 78.74 ಕೋಟಿ ರೂ. ವೆಚ್ಚದ ಕುಡಿಯುವ ನೀರು ಕಾಮಗಾರಿಗೆ ಅಡಿಗಲ್ಲು, 8.50 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಮುಂದೆ 18 ತಿಂಗಳಿನಲ್ಲಿ ಚಿತ್ತಾಪುರ ಮತ್ತು ವಾಡಿ ಕುಡಿಯುವ ನೀರು ಯೋಜನೆ ಸಾಕಾರಗೊಂಡು ಪ್ರತಿ ವ್ಯಕ್ತಿಗೆ ತಲಾ 125 ಲೀಟರ್ ನೀರು ಸಿಗಲಿದೆ ಎಂದರು.
ಉಪಕಾರವಲ್ಲ,ಋಣ ತೀರಿಸುತ್ತಿರುವೆ:
ಚಿತ್ತಾಪುರ ಕ್ಷೇತ್ರದ ಶಾಸಕನಾಗಿ ಮತ್ತು ಮತದಾರರ ಸೇವಕನಾಗಿ ಪ್ರಗತಿಪರ ಕೆಲಸಗಳನ್ನು ಮಾಡುತ್ತಿರುವೆ. ಸಾರ್ವಜನಿಕರ ಕೆಲಸ ಮಾಡುವುದು ನನ್ನ ಧರ್ಮ ಮತ್ತು ಪರಮ ಕರ್ತವ್ಯವಾಗಿದೆ. ತಾಲೂಕಿನಲ್ಲಿ ಮೂಲಭೂತ ಸೌಕರ್ಯ, ಶೈಕ್ಷಣಿಕ ಪ್ರಗತಿ ಸೇರಿದಂತೆ ನೀರಾವರಿ ಯೋಜನೆಗಳ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಶಕ್ತಿಮೀರಿ ಅಭಿವೃದ್ದಿ ಕೆಲಸ ಮಾಡಿದ್ದೇನೆ. ನೀವು ಎಷ್ಟು ಶಕ್ತಿ ತುಂಬುತ್ತಿರೋ ಮತ್ತಷ್ಟು ಕೆಲಸ ಮಾಡುತ್ತೇನೆ. ಇಲ್ಲಿ ನಾನು ಯಾವುದೇ ಉಪಕಾರ ಮಾಡುತ್ತಿಲ್ಲ. ಬದಲಾಗಿ ಚುನಾವಣೆಯಲ್ಲಿ ನೀವು ನೀಡಿದ ಒಂದು ಮತಕ್ಕೆ ಉತ್ತರವಾಗಿ ನಿಮ್ಮ ಋಣ ತೀರಿಸುತ್ತಿರುವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಿಮ್ಮ ಆಶೀರ್ವಾದದಿಂದ ಐಟಿ ಬಿಟಿಯಲ್ಲಿ ಪ್ರಗತಿ:
ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಸಂದರ್ಭದಲ್ಲಿ ನಮಗೆ ಟಿಕೇಟ್ ನೀಡಲು ವಿರೋಧ ವ್ಯಕ್ತವಾಗಿತ್ತು. ಇನ್ನು ನಾನು ಮೊದಲ ಬಾರಿಗೆ ಐ.ಟಿ.-ಬಿ.ಟಿ ಸಚಿವನಾದ ನಂತರ ಪತ್ರಿಕೆಗಳು ಕೂಡಾ ಹಿಂದುಳಿದ ಚಿತ್ರಾಪುರ ಕ್ಷೇತ್ರದ ಶಾಸಕನಿಗೆ ಐ.ಟಿ. ಮಂತ್ರಿ ಮಾಡಲಾಗಿದೆ ಎಂದು ನನ್ನ ಬಗ್ಗೆ ವ್ಯಂಗ್ಯವಾಗಿ ಹೆಡ್ ಲೈನ್ ಕೊಟ್ಟರು. ಆಗ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಅವರ ಬಳಿ ಇದ್ದ ಐಟಿ-ಬಿಟಿ ಖಾತೆ ನನಗೆ ನೀಡಿದ್ದರು. ನಾನು ಐಟಿ-ಬಿಟಿ ಸಚಿವನಾದ ನಂತರ ಕೆಲ ವರ್ಷಗಳಲ್ಲಿ ಚಿತ್ತಾಪುರ ಶಾಸಕರನ್ನೆ ಐಟಿ -ಬಿಟಿ ಸಚಿವರನ್ನಾಗಿ ಮಾಡಿ ಎಂದು ಎಲ್ಲರೂ ಒತ್ತಾಯಿಸಿದ್ದರು. ಇದಕ್ಕೆಲ್ಲಾ ನಿಮ್ಮ ಆಶೀರ್ವಾದವೇ ಕಾರಣ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಚಿತ್ತಾಪುರ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟದ ತತ್ವದ ಆಧಾರದ ಮೇಲೆ ನಂಬಿಕೆ ಇಟ್ಟಿರುವ ಪ್ರಿಯಾಂಕ್ ಖರ್ಗೆ ಅವರು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡುತ್ತಿದ್ದಾರೆ. ಇಂದಿಲ್ಲಿ 87 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನದಲ್ಲಿ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗಿದೆ ಎಂದರು.
ಇದಕ್ಕು ಮುನ್ನ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತ ನರಸಿಂಹ ರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಚಿತ್ತಾಪುರ ಮತ್ತು ವಾಡಿ ಪಟ್ಟಣಕ್ಕೆ ಕ್ರಮವಾಗಿ ಕಾಗಿಣಾ, ಭೀಮಾ ನದಿ ಮೂಲದಿಂದ ಕುಡಿಯುವ ನೀರು ಯೋಜನೆಗೆ ಕೇಂದ್ರ ಸರ್ಕಾರದ ಶೇ.50, ರಾಜ್ಯ ಸರ್ಕಾರದ ಶೇ.40 ಹಾಗೂ ಸ್ಥಳೀಯ ಸಂಸ್ಥೆಯ ಶೇ.10ರ ಪಾಲುದಾರಿಕೆ ಅನುದಾನದಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದ್ದು, 18 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಚಿತ್ತಾಪುರ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕೆ.ಆರ್.ಐ.ಡಿ.ಎಲ್ ಕಾರ್ಯನಿರ್ವಾಹಕ ಅಭಿಯಂತ ಸೌರಭ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತ ನರಸಿಂಹ ರೆಡ್ಡಿ,ಕೆ.ಆರ್.ಐ.ಡಿ.ಎಲ್. ಇ.ಇ. ಸೌರಭ್, ಮುಖಂಡರಾದ ನಾಗರೆಡ್ಡಿ ಕರದಾಳ, ಮುಕ್ತಾರ ಪಟೇಲ್, ಶಿವಾನಂದ ಪಾಟೀಲ, ಭೀಮಣ್ಣ ಸಾಲಿ, ರಮೇಶ ಮರಗೋಳ, ಮಹೆಬೂಬ್ ಸಾಬ್, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ರಸೂಲ್ ಸಾಬ್ ಸೇರಿದಂತೆ ಅನೇಕ ಮುಖಂಡರು ಇದ್ದರು.