ದಾದಿಯರು ಆಸ್ಪತ್ರೆಗಳ ಬೆನ್ನೆಲುಬು : ಶಶೀಲ್ ಜಿ. ನಮೋಶಿ
ಕಲಬುರಗಿ : ದಾದಿಯರು ಆಸ್ಪತ್ರೆಗಳ ಬೆನ್ನೆಲುಬು ಆಗಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಹೇಳಿದ್ದಾರೆ.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ದಾದಿಯರ ನೇತೃತ್ವದಲ್ಲಿ ನಡೆದ ʼವಿಶ್ವ ದಾದಿಯರ ದಿನಾಚರಣೆʼ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ಚಿಕಿತ್ಸೆಗಾಗಿ ಬಂದಂತಹ ರೋಗಿಗಳನ್ನು ದಾದಿಯರು ನಗು ಮುಖದಿಂದ ಸ್ವಾಗತಿಸಿದಾಗಲೇ ರೋಗಿಗಳ ಅರ್ಧ ಕಾಯಿಲೆ ಗುಣವಾಗಿರುತ್ತದೆ. ಮತ್ತು ರೋಗಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ನರ್ಸಿಂಗ್ ವೃತ್ತಿ ಎಷ್ಟು ಪ್ರಾಮುಖ್ಯವಾದುದು ಎಂಬುದನ್ನು ಫ್ಲಾರೆನ್ಸ್ ನೈಟಿಂಗೇಲ್ ತೋರಿಸಿಕೊಟ್ಟಿದ್ದಾರೆ ಎಂದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಮಾತನಾಡಿ, ಎಲ್ಲರೂ ಕೆಲಸ ಮಾಡುತ್ತಾರೆ. ಆದರೆ, ತಮ್ಮ ಕೆಲಸದ ಮೂಲಕ ಗುರುತಿಸಿಕೊಳ್ಳುವುದು ಬಹಳ ಮುಖ್ಯ. ದಾದಿಯರ ವೃತ್ತಿಗೆ ವಿಶೇಷ ಸ್ಥಾನಮಾನ ಇದೆ. ನಾವು ಯಾವುದೇ ಕೆಲಸ ಮಾಡಿದರೂ ಅದನ್ನು ದಾಖಲಿಸಬೇಕು. ಅದು ಮುಂದಕ್ಕೆ ಪ್ರಯೋಜನಕ್ಕೆ ಬರುತ್ತದೆ ಎಂದರು.
ನರ್ಸಿಂಗ್ ಈಗ ಬರೀ ಸೇವೆ ಆಗಿರದೆ ವೃತ್ತಿ ಆಗಿದೆ. ಒಂದು ಆಸ್ಪತ್ರೆ ಚೆನ್ನಾಗಿದೆ ಎಂದರೆ, ಅಲ್ಲಿ ಕೆಲಸ ಮಾಡುವ ದಾದಿಯರು ಮುಖ್ಯ ಕಾರಣ ಆಗುತ್ತಾರೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಸ ಪಾಟೀಲ್ , ಬಸವೇಶ್ವರ ಆಸ್ಪತ್ರೆಯ ಸಂಚಾಲಕ ಡಾ.ಕಿರಣ್ ದೇಶಮುಖ್ ಹಾಗೂ ಆಡಳಿತ ಮಂಡಳಿ ಸದಸ್ಯರು, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಶರಣಗೌಡ ಪಾಟೀಲ್, ವೈಸ್ ಡೀನ್ ಡಾ.ವಿಜಯಕುಮಾರ್ ಕಪ್ಪಿಕೇರಿ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ,ಆನಂದ ಗಾರಂಪಳ್ಳಿ, ಆಡಳಿತಾಧಿಕಾರಿಗಳಾದ ಡಾ.ಎಂ.ಆರ್.ಪೂಜಾರಿ ಉಪಸ್ಥಿತರಿದ್ದರು.
ಆಸ್ಪತ್ರೆಯ ನರ್ಸಿಂಗ್ ಮೇಲ್ವಿಚಾರಕರಾದ ಎಲ್. ಸುಮತಿ ಸ್ವಾಗತಿಸಿದರು. ರೇಣುಕಾ ಪ್ರಾರ್ಥಿಸಿದರು, ಅಪೀಲು ಕಾರ್ಯಕ್ರಮ ನಿರೂಪಿಸಿದರು, ಲೀನಾ ವಂದಿಸಿದರು.