ಕಾಸರಗೋಡು: ವ್ಯಕ್ತಿಯ ಕೊಲೆ ಪ್ರಕರಣ; ಆರೋಪಿ ಸೆರೆ
ಕಾಸರಗೋಡು: ಅಡೂರು ಚಂದನಕ್ಕಾಡ್ ನ ಸತೀಶ್ ( 48) ಎಂಬವರ ನಿಗೂಢ ಸಾವು ಕೊಲೆ ಎಂದು ಸಾಬೀತಾಗಿದ್ದು, ಈ ಹಿನ್ನಲೆಯಲ್ಲಿ ಈತನ ಗೆಳೆಯನೋರ್ವನನ್ನು ಆದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಿದಾನಂದ ಪೊಲೀಸ್ ವಶದಲ್ಲಿರುವ ವ್ಯಕ್ತಿ. ಸತೀಶ್ ಮಂಗಳವಾರ ಸಂಜೆ ನೆರೆಮನೆಯ ಬಳಿ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಗೆ ತಲಪಿಸಿದರೂ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದಾಗ ಮೃತದೇಹದಲ್ಲಿ ಗಾಯಗಳು ಪತ್ತೆಯಾಗಿತ್ತು. ಕುತ್ತಿಗೆಯ ಎಲುಬು ಮುರಿದಿರುವುದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆ ವರದಿಯಂತೆ ಪೊಲೀಸರು ತನಿಖೆ ನಡೆಸಿ ಚಿದಾನಂದ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ತಪ್ಪೊಪ್ಪಿಕೊಂಡಿದ್ದು ಬಳಿಕ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಸತೀಶ್ ಹಾಗೂ ಚಿದಾನಂದ ಸಮೀಪದ ಮನೆಯೊಂದರಲ್ಲಿ ಒಟ್ಟಿಗೆ ಸೇರಿದ್ದು, ಈ ಸಂದರ್ಭ ಪಾನಮತ್ತರಾಗಿ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ. ತಳ್ಳಾಟ ನಡೆದಿದ್ದು, ನೆಲಕ್ಕೆ ಬಿದ್ದ ಸತೀಶ್ ರನ್ನು ಮನೆಯ ವರಾಂಡದಲ್ಲಿ ಮಲಗಿಸಿ ಪರಾರಿಯಾಗಿದ್ದನು ಎನ್ನಲಾಗಿದೆ. ಸತೀಶ್ ಮನೆಗೆ ಬಾರದೆ ಇದ್ದುದರಿಂದ ಸಹೋದರಿ ಮೊಬೈಲ್ ಗೆ ಕರೆ ಮಾಡಿದರೂ ರಿಸೀವ್ ಮಾಡದೆ ಇದ್ದುದರಿಂದ ಶೋಧ ನಡೆಸಿದಾಗ ಸಮೀಪದ ಮನೆಯೊಂದರ ವರಾಂಡ ದಲ್ಲಿ ಬಿದ್ದಿರುವುದು ಕಂಡು ಬಂದಿದೆ. ಬಳಿಕ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ಸತೀಶ್ ನ ಅಂತ್ಯಕ್ರಿಯೆ ಯಲ್ಲಿ ಚಿದಾನಂದ ಪಾಲ್ಗೊಳ್ಳದಿರುವುದು ಈತನ ಮೇಲೆ ಸಂಶಯ ಬರಲು ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.