×
Ad

ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ ಲಾಲ್, ಕೃಪೇಶ್ ಕೊಲೆ ಪ್ರಕರಣ: ಡಿ.28ರಂದು ಎರ್ನಾಕುಲಂ ಸಿಬಿಐ ನ್ಯಾಯಾಲಯ ತೀರ್ಪು

Update: 2024-12-27 11:09 IST

ಕಾಸರಗೋಡು: ಸುಮಾರು ಐದು ವರ್ಷಗಳ ಹಿಂದೆ ನಡೆದ ಪೆರಿಯದ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ ಲಾಲ್ ಮತ್ತು ಕೃಪೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಲಂ ಸಿಬಿಐ ನ್ಯಾಯಾಲಯವು ಡಿಸೆಂಬರ್ 28ರಂದು ತೀರ್ಪು ನೀಡಲಿದೆ.

ಪ್ರಕರಣದಲ್ಲಿ ಉದುಮ ಮಾಜಿ ಶಾಸಕ ಕೆ.ವಿ.ಕುಂಞಿರಾಮನ್, ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಸಿಪಿಎಂ ಪೆರಿಯ ಸ್ಥಳೀಯ ಸಮಿತಿ ಮಾಜಿ ಕಾರ್ಯದರ್ಶಿ ಎನ್.ಬಾಲಕೃಷ್ಣನ್, ಪಾಕ್ಕಂ ಮಾಜಿ ಸ್ಥಳೀಯ ಕಾರ್ಯದರ್ಶಿ ರಾಘವನ್ ವೆಲುತೊಳ್ಳಿ ಸೇರಿದಂತೆ 24 ಮಂದಿ ಆರೋಪಿಗಳಾಗಿದ್ದಾರೆ.

ಪ್ರಕರಣದ ಮೊದಲ ಆರೋಪಿ ಸ್ಥಳೀಯ ಸಮಿತಿ ಮಾಜಿ ಸದಸ್ಯ ಎ.ಪೀತಾಂಬರನ್ ಸೇರಿದಂತೆ 14 ಮಂದಿಯನ್ನು ಕ್ರೈಂ ಬ್ರಾಂಚ್ ಹಾಗೂ ಕೆವಿ ಕುಂಞಿರಾಮನ್ ಸೇರಿದಂತೆ 10 ಮಂದಿಯನ್ನು ಸಿಬಿಐ ಬಂಧಿಸಿತ್ತು.

2019ರ ಫೆ.17ರಂದು ರಾತ್ರಿ ಪೆರಿಯ ಕಲ್ಯೋಟ್ ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಶರತ್ ಲಾಲ್ ಮತ್ತು ಕೃಪೇಶ್ ರನ್ನು ಕೊಲೆಗೈಯಲಾಗಿತ್ತು.

ಆರಂಭದಲ್ಲಿ, ಪ್ರಕರಣವನ್ನು ಸ್ಥಳೀಯ ಪೊಲೀಸರ ವಿಶೇಷ ತಂಡವು ತನಿಖೆ ನಡೆಸಿತು ಮತ್ತು ನಂತರ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಯಿತು. ಆದರೆ ತನಿಖೆ ಬಗ್ಗೆ ನಿರಾಶೆ ಮತ್ತು ಹತಾಶೆಗೊಂಡಿರುವ ಶರತ್ ಲಾಲ್ ಮತ್ತು ಕೃಪೇಶ್ ಅವರ ಪೋಷಕರು ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಇದರ ಪರಿಣಾಮವಾಗಿ ಹೈಕೋರ್ಟ್ ಕ್ರೈಂ ಬ್ರಾಂಚ್ ನ ಚಾರ್ಜ್ ಶೀಟ್ ರದ್ದುಗೊಳಿಸಿ ಸಿಬಿಐ ತನಿಖೆಗೆ ಆದೇಶಿಸಿತು. ಆದರೆ, ಹೈಕೋರ್ಟ್ನ ವಿಭಾಗೀಯ ಪೀಠವು ಸಿಬಿಐ ತನಿಖೆಯನ್ನು ಮುಂದುವರಿಸುವ ಏಕ ಪೀಠದ ನಿರ್ಧಾರವನ್ನು ಎತ್ತಿಹಿಡಿದಿದೆ ಮತ್ತು ಅಪರಾಧ ವಿಭಾಗದ ಚಾರ್ಜ್ಶೀಟ್ ಅನ್ನು ಉಳಿಸಿಕೊಂಡಿದೆ.

ನಂತರ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದು, ತೀರ್ಪು ಮತ್ತೆ ಸಂತ್ರಸ್ತರ ಪರವಾಗಿದ್ದು, ಸಿಬಿಐ ತನಿಖೆಗೆ ಕಾರಣವಾಯಿತು. ಡಿವೈಎಸ್ಪಿ ಅನಂತಕೃಷ್ಣನ್ ನೇತೃತ್ವದ ಸಿಬಿಐ ತಂಡ ತನಿಖೆ ನಡೆಸಿದೆ. ಆರಂಭದಲ್ಲಿ ಜಾಮೀನು ಪಡೆದಿದ್ದ ಕೆ.ಮಣಿಕಂಠನ್, ಎನ್.ಬಾಲಕೃಷ್ಣನ್, ಅಳಕೋಡ್ ಮಣಿ ಸೇರಿದಂತೆ 14 ಮಂದಿಯನ್ನು ಬಂಧಿಸಲಾಗಿತ್ತು. ಉಳಿದ 11 ಆರೋಪಿಗಳು ಸದ್ಯ ವಿಯ್ಯೂರು ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಸಿಬಿಐ ಬಂಧಿಸಿದ್ದ 10 ಜನರ ಪೈಕಿ ಕೆ.ವಿ.ಕುಂಞಿರಾಮನ್, ರಾಘವನ್ ವೇಲುತೊಳ್ಳಿ ಸೇರಿದಂತೆ ಐವರಿಗೆ ಜಾಮೀನು ಮಂಜೂರಾಗಿದೆ. ಈಚಿಲಡುಕ್ಕಂನ ಸಿಪಿಎಂ ಮಾಜಿ ಶಾಖಾ ಕಾರ್ಯದರ್ಶಿ ಪಿ.ರಾಜೇಶ್ ಸೇರಿದಂತೆ ಉಳಿದ ಐವರು ಕಾಕ್ಕನಾಡು ಜೈಲಿನಲ್ಲಿದ್ದಾರೆ. ಫೆಬ್ರವರಿ 2023ರಲ್ಲಿ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ ಗೊಂಡಿತ್ತು. ಡಿ.28ರಂದು ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಪೆರಿಯ ವ್ಯಾಪ್ತಿಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News