ಮಡಿಕೇರಿ: ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನಿರ್ಮಾಣ ಹಂತದ ಕಟ್ಟಡದಲ್ಲಿ ಪತ್ತೆ
ಮಡಿಕೇರಿ, ಜು.15: ಮಡಿಕೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಇಂದು ಪತ್ತೆಯಾಗಿರುವುದು ವರದಿಯಾಗಿದೆ.
ಮಡಿಕೇರಿ ತಾಲೂಕಿನ ಅರೆಕಾಡು ಗ್ರಾಮದ ನಿವಾಸಿ ಕೆ.ಎನ್.ರಘು(38) ಮೃತಪಟ್ಟವರು. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಕ್ರಿಟಿಕಲ್ ಕೇರ್ ಕಟ್ಟಡದ ನೀರು ತುಂಬಿದ ಗುಂಡಿಯಲ್ಲಿ ರಘು ಅವರ ಮೃತದೇಹ ದೊರೆತಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ರಘು ಅವರನ್ನು ಜು.8 ರಂದು ಮಡಿಕೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಜು.11 ರಂದು ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಜೊತೆಗಿದ್ದ ತಾಯಿಯ ಬಳಿಯಿಂದ 200 ರೂ. ಪಡೆದ ರಘು ಕಾಫಿ ಹಾಗೂ ತಿಂಡಿಯನ್ನು ತರಲು ಹೊಟೇಲ್ ಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದರು. ಇದರಿಂದ ಆತಂಕಗೊಂಡ ರಘು ಪತ್ನಿ ರಾಜೇಶ್ವರಿ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು
ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.