ಮಡಿಕೇರಿ: ಕಾರು ಢಿಕ್ಕಿಯಾಗಿ ಮಹಿಳೆ ಸಾವು, ಮೂವರಿಗೆ ಗಾಯ

Update: 2024-04-21 16:53 GMT

ಮಡಿಕೇರಿ: ಕಾರು ಢಿಕ್ಕಿಯಾಗಿ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಮಹಿಳೆಯರು ಗಾಯಗೊಂಡಿರುವ ಘಟನೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ನಡೆದಿದೆ.

ವಿವಾಹ ಸಮಾರಂಭಕ್ಕೆಂದು ಬಂದಿದ್ದ ಕಾಸರಗೋಡುವಿನ ರಾಬಿಯ (45) ಎಂಬವರು ಮೃತಪಟ್ಟವರು. 7ನೇ ಹೊಸಕೋಟೆಯಲ್ಲಿರುವ ಇವರ ಸಂಬಂಧಿಯ ವಿವಾಹ ಗದ್ದೆಹಳ್ಳದಲ್ಲಿ ನಡೆಯುತ್ತಿತ್ತು. ವಿವಾಹದಲ್ಲಿ ಪಾಲ್ಗೊಂಡಿದ್ದ ರಾಬಿಯ ರಸ್ತೆ ಬದಿಯ ವಿದ್ಯುತ್ ಕಂಬದ ಬಳಿ ನಿಂತಿದ್ದರು.

ಈ ಸಂದರ್ಭ ಗದ್ದೆಹಳ್ಳದ ನಿವಾಸಿ ಶರತ್ (30) ಎಂಬವರು ಚಲಾಯಿಸುತ್ತಿದ್ದ ಕಾರು ಇಬ್ಬರು ಮಹಿಳೆಯರಿಗೆ ಢಿಕ್ಕಿಯಾಗಿ ನಂತರ ನಿಯಂತ್ರಣಕ್ಕೆ ಸಿಗದೆ ರಾಬಿಯ ಅವರಿಗೆ ಢಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ರಾಬಿಯ ಅವರು ಸ್ಥಳದಲ್ಲೇ ಮೃತಪಟ್ಟರು. ಮೊದಲು ಕಾರಿಗೆ ಸಿಲುಕಿದ ಖೈರುನ್ನಿಸ ಹಾಗೂ ಸಿದ್ದೀಕ ತೀವ್ರವಾಗಿ ಗಾಯಗೊಂಡಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಚಾಲಕ ಶರತ್ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಪರಿಣಾಮ ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ಘಟನೆಯನ್ನು ಖಂಡಿಸಿ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಚಾಲಕನ ವಿರುದ್ಧ ಕಠಿಣ ಸೆಕ್ಷನ್ ಗಳನ್ನು ಹಾಕಬೇಕೆಂದು ಪಟ್ಟುಹಿಡಿದರು. ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News