ಮಾಲೂರು : ಗೂಡ್ಸ್ ಟೆಂಪೋ–ಖಾಸಗಿ ಬಸ್ ಢಿಕ್ಕಿ; ಓರ್ವ ಮೃತ್ಯು, ಮೂವರಿಗೆ ಗಾಯ
ಮಾಲೂರು (ಕೋಲಾರ): ಗೂಡ್ಸ್ ಟೆಂಪೋ ಹಾಗೂ ಖಾಸಗಿ ಕಂಪನಿಯ ಬಸ್ ಮುಖಾಮುಖಿ ಢಿಕ್ಕಿ,ಯಾಗಿ, ಗೂಡ್ಸ್ ಟೆಂಪೋದಲ್ಲಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ದೊಡ್ಡ ಕಡತೂರು ಗ್ರಾಮದ ಬಳಿ ಬುಧವಾರ ಬೆಳಗ್ಗಿನ ಜಾವ ನಡೆದಿದೆ.
ತಮಿಳುನಾಡಿನ ಸೂಲಗಿರಿ ಮೂಲದ ರಾಧಾಕೃಷ್ಣ (35) ಮೃತಪಟ್ಟ ವ್ಯಕ್ತಿ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತಮಿಳುನಾಡಿನಿಂದ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಕೊತ್ತಂಬರಿ ಸೊಪ್ಪು ಖರೀದಿಸಲು ನಾಲ್ವರು ಗೂಡ್ಸ್ ಟೆಂಪೋದಲ್ಲಿ ಹೊರಟಿದ್ದರು. ಮಾಲೂರು–ಕೋಲಾರ ರಸ್ತೆಯ ದೊಡ್ಡ ಕಡತೂರು ಸಮೀಪ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಎದುರಿನಿಂದ ಬಂದ ಖಾಸಗಿ ಕಂಪನಿಯ ಬಸ್ಗೆ ಗೂಡ್ಸ್ ಟೆಂಪೋ ಢಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಚಾಲಕನ ಪಕ್ಕದಲ್ಲಿ ಕುಳಿತಿದ್ದ ರಾಧಾಕೃಷ್ಣ ಅವರು ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡ ಮೂವರನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಮಾಲೂರು ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.