ಕನಕಗಿರಿ ಉತ್ಸವಕ್ಕೆ ಮತ್ತೆ ಜೀವ !

Update: 2026-08-05 16:01 IST

ಕನಕಗಿರಿ : ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಿವರಾಜ ತಂಗಡಗಿ ಅಧಿಕಾರ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ವಿವಿಧ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಐತಿಹಾಸಿಕ ಕನಕಗಿರಿ ಉತ್ಸವಕ್ಕೆ ಮತ್ತೆ ಜೀವ ಬಂದಿದೆ.

ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಈ ಹಿಂದೆ ಶಿವರಾಜ ತಂಗಡಗಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ಮೇ 16 ಮತ್ತು 17ರಂದು ಉತ್ಸವ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಿದ್ಧತಾ ಸಭೆಗಳು ನಡೆದಿದ್ದು, ಆಮಂತ್ರಣ ಪತ್ರಿಕೆ ಮುದ್ರಣೆ, ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿತ್ತು. ವೇದಿಕೆ ನಿರ್ಮಾಣ ಸೇರಿದಂತೆ ಸಿದ್ಧತಾ ಕಾಮಗಾರಿಗಳು ಭರದಿಂದ ಸಾಗಿದ್ದವು.

ಆದರೆ ಮುಖ್ಯಮಂತ್ರಿ ಸೂಚನೆ ಹಿನ್ನೆಲೆಯಲ್ಲಿ ಮೇ 12ರಂದು ಉತ್ಸವವನ್ನು ಜೂನ್ 10 ಮತ್ತು 11ಕ್ಕೆ ಮುಂದೂಡಲಾಗಿತ್ತು. ಬಳಿಕ ಮಳೆಗಾಲದ ಕಾರಣದಿಂದ ಉತ್ಸವ ಮತ್ತೊಮ್ಮೆ ಮುಂದೂಡಲ್ಪಟ್ಟಿತ್ತು.

ಇದೀಗ ಸಚಿವರಾಗಿರುವ ಶಿವರಾಜ ತಂಗಡಗಿ ಶೀಘ್ರದಲ್ಲೇ ಮತ್ತೊಂದು ಪೂರ್ವಭಾವಿ ಸಭೆ ನಡೆಸಿ ಉತ್ಸವದ ಸಿದ್ಧತೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

2010, 2014, 2015 ಹಾಗೂ 2024ರಲ್ಲಿ ಕನಕಗಿರಿ ಉತ್ಸವ ಯಶಸ್ವಿಯಾಗಿ ನಡೆದಿದ್ದು, 2026ರ ಉತ್ಸವ ಮಾತ್ರ ಎರಡು ಬಾರಿ ಮುಂದೂಡಲ್ಪಟ್ಟಿರುವುದು ಸಾರ್ವಜನಿಕರ ಗಮನ ಸೆಳೆದಿತ್ತು. ಈ ಬಾರಿಯಾದರೂ ಉತ್ಸವವನ್ನು ಅದ್ದೂರಿಯಾಗಿ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕನಕಗಿರಿ ಉತ್ಸವ ನನ್ನ ಕನಸಿನ ಯೋಜನೆಯಾಗಿದೆ. ನನ್ನ ಅವಧಿಯಲ್ಲೇ ನಾಲ್ಕು ಬಾರಿ ಉತ್ಸವ ಯಶಸ್ವಿಯಾಗಿ ನಡೆಸಿದ್ದೇವೆ. ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗುವುದು

ಶಿವರಾಜ ತಂಗಡಗಿ, ಸಚಿವ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಹೊನ್ನೂರ ಹುಸೇನ ಬೇಲ್ದಾರ್

contributor

Similar News