Kuknoor | ಖುದಿರಾಮ್ ಬೋಸ್ರ ತ್ಯಾಗ ಯುವಜನತೆಗೆ ಸ್ಫೂರ್ತಿ : ಸಿದ್ದಲಿಂಗ ಬಾಗೇವಾಡಿ
ಕುಕನೂರು : ಭಾರತದ ಸ್ವಾತಂತ್ರ್ಯ ಹೋರಾಟದ ಅಗ್ನಿಯುಗದ ಹರಿಕಾರ ಹಾಗೂ ಕ್ರಾಂತಿಕಾರಿ ಖುದಿರಾಮ್ ಬೋಸ್ ಅವರ 118ನೇ ಹುತಾತ್ಮ ದಿನಾಚರಣೆಯನ್ನು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾನ ಮನಸ್ಕರ ಬಳಗದ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಭಾಷಣಕಾರ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಭಾರತದ ಜನತೆ ದೌರ್ಜನ್ಯವನ್ನು ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಪೂರ್ವ ಭಾರತದಲ್ಲಿ ದಿಟ್ಟತನದಿಂದ ತೋರಿಸಿಕೊಟ್ಟ ಯೋಧ ಖುದಿರಾಮ್ ಬೋಸ್. ಅವರ ಧೈರ್ಯ, ದೇಶಪ್ರೇಮ ಹಾಗೂ ಬಲಿದಾನ ಅಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ್ದು, ಇಂದಿಗೂ ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧದ ಹೋರಾಟಗಳಿಗೆ ಪ್ರೇರಣೆಯಾಗಿದೆ ಎಂದರು.
ಬಂಗಾಳದ ಜನತೆ ಖುದಿರಾಮ್ ಬೋಸ್ ಅವರನ್ನು ‘ಅಗ್ನಿಶಿಶು’ ಹಾಗೂ ‘ಧೀರ ಯೋಧ’ ಎಂದು ಕರೆಯುತ್ತಿದ್ದರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಅವರ ಜೀವನ ಹಾಗೂ ಹೋರಾಟ ಇಂದಿನ ಯುವಜನತೆಗೆ ಮಾದರಿಯಾಗಿದೆ. ಅವರ ತ್ಯಾಗವನ್ನು ಕೇವಲ ಸ್ಮರಣೆಗೆ ಸೀಮಿತಗೊಳಿಸದೆ, ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಸಮಾಜದಲ್ಲಿ ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಅತಿಥಿಯಾಗಿ ಎಐಡಿವೈಒ ಮುಖಂಡ ಶರಣು ಪಾಟೀಲ್ ಮಾತನಾಡಿ, ಖುದಿರಾಮ್ ಬೋಸ್ ಅವರ ಜೀವನ ಹಾಗೂ ಹೋರಾಟವನ್ನು ಇಂದಿನ ಯುವಜನತೆ ಅರಿತುಕೊಂಡು, ಅವರ ದೇಶಪ್ರೇಮ, ಧೈರ್ಯ ಮತ್ತು ತ್ಯಾಗದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾನ ಮನಸ್ಕರ ಬಳಗದ ಸದಸ್ಯರಾದ ಭೀಮಾಶಂಕರ ಪಾಣೇಗಾಂವ, ಚಂದ್ರು ಭಾನಾಪುರ, ರುದ್ರಪ್ಪ ಭಂಡಾರಿ, ಬಸವರಾಜ ಕೊಡ್ಲಿ, ಮಂಜುನಾಥ ಅಂಗಡಿ, ಬಸವರಾಜ ಉಪ್ಪಿನ್, ರವಿ ಹಿರೇಮನಿ, ಕನಕರಾಯ ಭಜಂತ್ರಿ, ಬಸವರಾಜ ಕೊನಾರಿ, ಮುರಾರಿ ಭಜಂತ್ರಿ, ವಿಶ್ವನಾಥ ಬಿನ್ನಾಳ ಸೇರಿದಂತೆ ಹಲವರು ಇದ್ದರು.