ಸಭಾಪತಿ ಆಯ್ಕೆ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ: ಸಚಿವ ಯು.ಟಿ. ಖಾದರ್
ಸಚಿವ ಯು.ಟಿ. ಖಾದರ್ (File Photo)
ಮೈಸೂರು: ಕಳೆದ ಮೂರುವರ್ಷದಿಂದ ಒಂದು ಓಟಿಗಾಗಿ ಬದಲಾವಣೆ ಯಾಕೆ ಎಂದು ವಿಧಾನಪರಿಷತ್ ಸಭಾಪತಿ ಬದಲಾವಣೆ ಮಾಡಿರಲಿಲ್ಲ. ಬಸವರಾಜ್ ಹೊರಟ್ಟಿ ಅವರೇ ಮುಖ್ಯಮಂತ್ರಿಗಳ ಬಳಿ ತೆರಳಿ ರಾಜೀನಾಮೆ ಪತ್ರ ಬರೆದು ಕೊಟ್ಟಿದ್ದಾರೆ. ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಆಕ್ದೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಭಾಪತಿ ಎನ್ನುವ ಸಂವಿಧಾನಿಕ ಹುದ್ದೆಯನ್ನು ಮುಂದೆ ಇಟ್ಟುಕೊಂಡು ರಾಜಕಾರಣ ಮಾಡಬಾರದಾಗಿತ್ತು. ಅದು ರಾಜ್ಯಕ್ಕೆ ಕಪ್ಪು ಚುಕ್ಕೆ ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಗೆ ಸಚಿವ ಸ್ಥಾನ ತಪ್ಪಿದ ವಿಚಾರದ ಬಗ್ಗೆ ಮಾತನಾಡಿದ ಅವರು, ತನ್ವೀರ್ ಸೇಠ್ ಅವರು ಹಿರಿಯ ರಾಜಕಾರಣಿಗಳು. ಸಚಿವರಾಗುವ ಅರ್ಹತೆ ಅವರಿಗೆ ಇದೆ. ಮೈಸೂರಿಗರೂ ತ್ಯಾಗಕ್ಕೆ ಎತ್ತಿದ ಕೈ. ಮೈಸೂರಿನ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟಿದ್ದಾರೆ. ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಿ ಎಂದ ಒಂದೇ ದಿನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸೋನಿಯಾ ಗಾಂಧಿಯಂತವರು ಪ್ರಧಾನಿ ಸ್ಥಾನವನೇ ಬಿಟ್ಟುಕೊಟ್ಟಿದ್ದಾರೆ. ಮುಂದೆ ತನ್ವೀರ್ ಸೇಠ್ ಅವರಿಗೂ ಒಳ್ಳೆ ಕಾಲ ಬರುತ್ತದೆ ಎಂದು ಹೇಳಿದರು.
ಖಾತೆ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳದ್ದೇ ಪರಮಾಧಿಕಾರ. ವರಿಷ್ಠರ ಜೊತೆ ಚರ್ಚೆ ಮಾಡಿ ಎಲ್ಲರಿಗೂ ಸಮರ್ಪಕವಾಗಿ ಖಾತೆ ಹಂಚಿಕೆ ಮಾಡುತ್ತಾರೆ. ಎಲ್ಲಾ ಖಾತೆಗಳು ಕೂಡ ಪವರ್ ಫುಲ್ ಎಂದು ಹೇಳಿದರು.
ಸ್ಟಾರ್ ಹೋಟೆಲ್ ಗಳ ಮೇಲೆ ಆಹಾರ ಅಧಿಕಾರ ದಾಳಿ ವಿಚಾರದ ಬಗ್ಗೆ ಮಾತನಾಡಿದ ಸಚಿವ ಯು.ಟಿ.ಖಾದರ್, ಹೋಟೆಲ್ ಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ನಮ್ಮ ಉದ್ದೇಶ ಅಲ್ಲ, ಹೋಟೆಲ್ ಮಾಲೀಕರಿಗೆ ಅದರ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದೇವೆ. ಹೋಟೆಲ್ ಗೆ ಹೋಗುವ ಜನರಿಗೂ ಎಲ್ಲವೂ ಸರಿ ಇಲ್ಲ ಅಂತ ಗೊತ್ತಾಗಬೇಕು ಎಂದರು.