×
Ad

ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭದ ಜೊತಗೆ ಅಳಿವಿನಂಚಿನಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕಿದೆ: ಸರ್ಕಾರಕ್ಕೆ ಸಾಹಿತಿ ದೇವನೂರು ಮಹಾದೇವ ಸಲಹೆ

Update: 2026-05-23 19:17 IST

ಮೈಸೂರು: ಕೆಪಿಎಸ್ ಮ್ಯಾಗ್ನೆಟ್ ಶಾಲೆ ಅರಂಭದ ಜೊತೆಗೆ ಅಳಿವಿನಂಚಿನಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಸರ್ಕಾರಕ್ಕೆ ಸಲಹೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಸಚಿವ ಮಧು ಬಂಗಾರಪ್ಪ ಶನಿವಾರ ಕುವೆಂಪು ನಗರದ ನವಿಲು ರಸ್ತೆಯಲ್ಲಿರುವ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ನಿವಾಸಕ್ಕೆ ತೆರಳಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭಕ್ಕೂ ಮುನ್ನ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದ ವೇಳೆ ಈ ಸಲಹೆ ನೀಡಿದರು.

ನಮ್ಮ ಮಾತೃಭಾಷೆ ಕನ್ನಡ, ಅದು ಅಳಿವಿನಂಚಿನಲ್ಲಿದ್ದು ಪ್ರಾಣಿ, ಪಕ್ಷಿಗಳ ಬಾಯಿಗೆ ಆಹಾರವಾದಂತಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಶಿಕ್ಷಣ ಮಾಧ್ಯಮವನ್ನು ಉಳಿಸಬೇಕಿರುವುದು ಎಲ್ಲರ ಜವಾಬ್ದಾರಿ. ಹಾಗಾಗಿ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭದ ಜೊತೆಗೆ ಎಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಇರುತ್ತದೊ ಅಂತಹ ಕಡೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಕೊಡಬೇಕಿದೆ. ಕನ್ನಡ ರಾಜ್ಯ ಭಾಷೆಯೂ ಆಗಿರುವುದರಿಂದ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಗ್ರಾಮೀಣ ಕೃಪಾಂಕ ಮಾದರಿಯಲ್ಲಿ ಶೇ.10 ಕೃಪಾಂಕ ನೀಡಿದರೆ ಅಳಿವಿನ ಅಂಚಿನಲ್ಲಿರುವ ಕನ್ನಡವನ್ನು ಸಂರಕ್ಷಿಸಿದಂತಾಗುತ್ತದೆ ಎಂದು ಹೇಳಿದರು.

ಕೆಲವು ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿ ಒಬ್ಬ ಶಿಕ್ಷಕ, ಇಬ್ಬರು ಅಡುಗೆಯವರು, ಇಬ್ಬರು ವಿದ್ಯಾರ್ಥಿ ಒಬ್ಬ ಶಿಕ್ಷಕ ಒಬ್ಬ ಅಡುಗೆಯವರು ಇಂತಹ ವಾತಾವರಣ ನೋಡಿ ಬೇಸರ ಆಯಿತು. ಇದು ಶಿಕ್ಷಣ ಅಲ್ಲ ಇದೊಂತರ ಶಿಕ್ಷೆ. ಇಂತಹ ಸಂದರ್ಭದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭ ಉತ್ತಮ ಬೆಳೆವಣಿಗೆ. ಆಕರ್ಷಕವಾದ ಬಸ್ ವ್ಯವಸ್ಥೆ ನುರಿತ ಚಾಲಕ, ಮಕ್ಕಳನ್ನು ನೋಡಿಕೊಳ್ಳುವ ಆಯಾ, ಇದೆಲ್ಲವೂ ಮುಂದೆ ಪೋಷಕರು ಮತ್ತು ಮಕ್ಕಳನ್ನು ಸೆಳೆಯುವ ಶಿಕ್ಷಣ ವ್ಯವಸ್ಥೆ ಆಗಲಿದೆ. ಇದೆಲ್ಲವೂ ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ವ್ಯವಸ್ಥೆ ಆಗದಿದ್ದರೆ ಈ ಯೋಜನೆ ವಿಫಲವಾಗಲಿದೆ. ಈ ಎಚ್ಚರಿಕೆ ಶಿಕ್ಷಣ ಇಲಾಖೆಗೆ ಇರಬೇಕು ಎಂದು ಹೇಳಿದರು.

ಶಾಲೆಗಳನ್ನು ಮುಚ್ಚುತ್ತೇವೆ ಎಂದು ಎಲ್ಲಿಯೂ ಹೇಳಬೇಡಿ, ಒಬ್ಬ ಮಗುವೂ ಶಿಕ್ಷಣ ವಂಚಿತರಾಗಲು ಬಿಡುವುದಿಲ್ಲ ಎಂದು ಹೇಳಿ ಎಂದು ಸಾಹಿತಿ ದೇವನೂರ ಮಹಾದೇವ ಶಿಕ್ಷಣ ಸವಿವ ಮಧು ಬಂಗಾರಪ್ಪ ಅವರಿಗೆ ಆಗ್ರಹಿಸಿದರು.

ಮ್ಯಾಗ್ನೆಟ್ ಶಾಲೆ ಆರಂಭದ ಜೊತೆಗೆ ಮಕ್ಕಳಿಗೆ ನಾಟಕ, ಕಲೆಗಳ ಬಗ್ಗೆ ಆಸಕ್ತಿ ಮೂಡುವಂತೆ ಮಾಡಬೇಕು, ಉತ್ತಮ ನಾಟಕಗಳನ್ನು ಕಲಿಸುವ ಮೂಲಕ ಮಕ್ಕಳ ಪ್ರತಿಭೆಯನ್ನು ಹೊರಹಾಕಬೇಕು ಎಂದು ಹೇಳಿದರು.

ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಲ್ಲಿ ಮಕ್ಕಳಿಗೆ ಕಲಿಕೆ ಬರಹಕ್ಕೂ ಮುನ್ನ ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡಬೇಕು. ಉತ್ತಮ ಟ್ಯುಟೋರಿಯಲ್ ಗಳಲ್ಲಿ ಪರಿಣಿತ ಇಂಗ್ಲೀಷ್ ತಜ್ಞರನ್ನು ಕರೆಸಿ ವಾರದಲ್ಲಿ ಒಂದು ದಿನ ಸ್ಪೋಕನ್ ಇಂಗ್ಲೀಷ್ ಕಲಿಸಬೇಕು. ಆಗ ಮಕ್ಕಳು ಇಂಗ್ಲೀಷ್ ಬಗ್ಗೆಯೂ ಆಸಕ್ತಿ ಹೊಂದಿ ಕಲಿಯುತ್ತಾರೆ. ಇದರಿಂದ ಮಕ್ಕಳ ಭವಿಷ್ಯ ರೂಪುಗೊಳ್ಳಲಿದೆ ಎಂದು ಹೇಳಿದರು.

ಎಲ್ಲಾ ಜಾತಿಯ ಮಕ್ಕಳು ಒಂದೇ ಕಡೆ ಓದುವುದೇ ದೊಡ್ಡ ಶಿಕ್ಷಣ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ವೈಜ್ಞಾನಿಕ‌ ಮನೋಬಾವ ಕಲಿಸಬೇಕು. ಆ ನಿಟ್ಟಿನಲ್ಲಿ ತರಬೇತಿ ನೀಡಬೇಕು. ಸತ್ಯ ಕಥೆಗಳನ್ನು ಹೇಳಿಕೊಡಬೇಕು. ಸಂವಿಧಾನ ಆಶಯ ಮತ್ತು ಅದರ ಪ್ರಸ್ತಾಪವನ್ನು ಕಥಾ ರೂಪದಲ್ಲಿ ಹೇಳಿಕೊಡುವ ಮೂಲಕ ಹೆಳೆಯನಸ್ಸಿನಲ್ಲೇ ಮಕ್ಕಳಿಗೆ ಸಂವಿಧಾನದ ಆಶಯವನ್ನು ಬಿತ್ತಬೇಕು ಎಂದು ಹೇಳಿದರು.

ಮಕ್ಕಳಿಗೆ ಕನ್ನಡ ಮಾತನಾಡಲು ಬರುತ್ತದೆ. ಅಕ್ಷರ ಕಾಗುಣಿತ ಬರುವುದಿಲ್ಲ, ಬಿಎ ಮಾಡಿದವರಿಗೂ ಬರುವುದಿಲ್ಲ, ನಾನು ಕಾಗುಣಿತವನ್ನು ಈಗಲೂ ತಿದ್ದಿಸಿಕೊಳ್ಳುತ್ತೇನೆ. ಹಾಗಾಗಿ ಕಾಗುಣಿತವನ್ನು ವಿಶೇಷವಾಗಿ ಪರಿಗಣಿಸಿ ಗ್ರಾಮರ್ ಕಲಿಕೆ ಬಗ್ಗೆಯೂ ಹೆಚ್ಚು ಆಸಕ್ತಿ ತೋರಬೇಕು ಎಂದು ಹೇಳಿದರು.

ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭ ಮಾಡುವುದರಿಂದ ಹಾಲಿ ಇರುವ ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಕೊಡಬಾರದು. ತಕರಾರು ವ್ಯಾಜ್ಯ ತೆಗೆಯುವವರು ಹುಟ್ಟಿಕೊಳ್ಳುವ ಮುನ್ನ ಸರ್ಕಾರ ವಶಕ್ಕೆ ತೆಗೆದುಕೊಂಡು ಸ್ಥಳೀಯವಾಗಿ ಗ್ರಾಮ ಪಂಚಾಯತ್, ಅಥವಾ ಪಶುವೈದ್ಯಕೀಯ ಕಚೇರಿಗಳನ್ನು ತೆಗದು ಆ ಗ್ರಾಮದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ‌ಕೈಗೊಳ್ಳಬೇಕು ಎಂದು ಹೇಳಿದರು.

ಆದಿವಾಸಿ ಮಕ್ಕಳಿಗೆ ಆಶ್ರಮ ಶಾಲೆಗಳಿವೆ.ಆದರೆ ಕಾಡಂಚಿನ ಮಕ್ಕಳಿಗೆ, ಅಲೆಮಾರಿ ಮತ್ತು ಗುಳೆ ಹೋಗುವ ಮಕ್ಕಳಿಗೆ ಸರಿಯಾದ ಶಾಲೆಗಳಿಲ್ಲ, ಹಾಗಾಗಿ ಅವರಿಗೆ ವಿಶೇಷ ವಸತಿ ಶಾಲೆಗಳನ್ನು ಆರಂಭಿಸಬೇಕು. ಅಲೆಮಾರಿ ಮಕ್ಕಳುಗಳು ಎಲ್ಲೇ ಹೋದರು ಅವರಿಗೆ ಆಶ್ರಯ ಕೊಡಬೇಕು ಎಂದು ಸಲಹೆ ನೀಡಿದರು.

ಕೆಪಿಎಸ್ ಶಾಲೆ ಆರಂಭಕ್ಕೆ ವಿರೋಧಗಳು ವ್ಯಕ್ತವಾಗಬಹುದು. ಆದರೆ ನಾವಂದುಕೊಂಡಿರುವುದನ್ನು ಗಟ್ಟಿಗೊಳಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದಾಗ ಟೀಕೆಗಳು ಕಾಣುವುದಿಲ್ಲ. ನಾವು ಅಂದುಕೊಂಡಿರುವುದನ್ನು ಸಾಕಾರಗೊಳಿಸಬೇಕು ಎಂದು ಹೇಳಿದರು.

ಡಿಡಿಪಿಐ ಉದಯಕುಮಾರ್, ಬಿಇಒ ಕೃಷ್ಣ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್ ಅಭಿರುಚಿ ಗಣೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News