ವಿ.ಶ್ರೀನಿವಾಸಪ್ರಸಾದ್‌ ಅವರಂತಹ ಸ್ನೇಹಿತನನ್ನು ಕಳೆದುಕೊಂಡು ದುಃಖಿತನಾಗಿದ್ದೇನೆ : ಸಿಎಂ ಸಿದ್ಧರಾಮಯ್ಯ

Update: 2024-04-29 18:01 GMT

ಮೈಸೂರು : ವಿ.ಶ್ರೀನಿವಾಸಪ್ರಸಾದ್‌ ಅವರಂತಹ ಒಬ್ಬ ಸ್ನೇಹಿತನನ್ನು ಕಳೆದುಕೊಂಡು ದುಃಖಿತನಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅಶೋಕಪುರಂ ಸರ್ಕಾರಿ ಶಾಲೆಯಲ್ಲಿ ಸೋಮವಾರ ವಿ.ಶ್ರೀನಿವಾಸಪ್ರಸಾದ್‌ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ಆಸ್ಪತ್ರೆಗೆ ಭೇಟಿ ನೀಡಿದ್ದೆ ವೇಳೆ ಆರೋಗ್ಯ ಸುಧಾರಿಸುವ ವಿಶ್ವಾಸವಿತ್ತು. ಕಿಡ್ನಿ ಫೇಲ್‌ ಆಗಿದ್ದರೂ ವಿಲ್‌ ಪವರ್‌ ಚೆನ್ನಾಗಿತ್ತು ಎಂದು ದುಃಖ ವ್ಯಕ್ತಪಡಿಸಿದರು.

ಪ್ರಸಾದ್‌ ರಾಜಕೀಯದಲ್ಲಿ ನೇರ ನುಡಿಗೆ ಹೆಸರಾಗಿದ್ದವರು. ಸಮಾಜದ ಅಸಮಾನತೆ ಹೋಗಲಾಡಿಸಲು ಹೋರಾಟ ಮಾಡಿದವರು. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂದರು.

ಟಿಕೆಟ್‌ ಕೊಡಿಸಿದ ಪ್ರಸಾದ್‌: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ನಾನು ಮೊದಲ ಬಾರಿ ಶಾಸಕನಾಗಲು ಟಿಕೆಟ್‌ ಕೊಡಿಸಿದವರು ವಿ.ಶ್ರೀನಿವಾಸ್‌‍ ಪ್ರಸಾದ್‌. ರಾಜಕಾರಣದಲ್ಲಿ ನನ್ನ ಪರವಾಗಿ ಸದಾ ನಿಂತಿದ್ದ ವ್ಯಕ್ತಿ. ನಾನು ಸಚಿವನಾಗಲು ಹೋರಾಟ ಮಾಡಿದ್ದರು.

ನಂಬಿದ ವ್ಯಕ್ತಿಯನ್ನು ಎಂದು ಬಿಟ್ಟುಕೊಡುತ್ತಿರಲಿಲ್ಲ. ಸ್ನೇಹಕ್ಕೆ ಮತ್ತೊಂದು ಹೆಸರು ಶ್ರೀನಿವಾಸಪ್ರಸಾದ್‌. ಅವರು ಯಾವುದೇ ಪಕ್ಷದಲ್ಲಿದ್ದರೂ ನನ್ನ ಅವರ ಸಂಬಂಧ ಉತ್ತಮವಾಗಿತ್ತು ಎಂದು ಹೇಳಿದರು.

ಸಚಿವರಾದ ಕೆ. ವೆಂಕಟೇಶ್‌, ಎಚ್‌.ಸಿ. ಮಹದೇವಪ್ಪ, ಚಾ.ನಗರ ಅಭ್ಯರ್ಥಿ ಸುನಿಲ್‌ ಬೋಸ್‌‍, ಮೈಸೂರು ಅಭ್ಯರ್ಥಿ ಎಂ. ಲಕ್ಷ್ಮಣ್‌, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಮುಡಾ ಅಧ್ಯಕ್ಷ ಕೆ. ಮರೀಗೌಡ ಮುಂತಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News