ಗುತ್ತಿಗೆದಾರರ ಬಾಕಿ 35 ಸಾವಿರ ಕೋಟಿ ರೂ. ಹಣ ಬಿಡುಗಡೆಗೆ ಒತ್ತಾಯಿಸಿ ಮಾ.5 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ
ಸಿಎಂ ಸಿದ್ದರಾಮಯ್ಯ ಅರ್ಧಗಂಟೆ ಸಭೆ ನಡೆಸಿದೆ ಗುತ್ತಿಗೆದಾರರ ಸಮಸ್ಯೆ ಬಹುತೇಖ ಇತ್ಯರ್ಥ: ಆರ್.ಮಂಜುನಾಥ್
ಮೈಸೂರು: ಗುತ್ತಿಗೆದಾರರ ಬಾಕಿ 35 ಸಾವಿರ ಕೋಟಿ ಹಣ ಬಿಡುಗಡೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳ ಗಮನಸೆಳೆಯಲು ರಾಜ್ಯವ್ಯಾಪಿ ಶಾಂತಿಯುತ ಹೋರಾಟ ರೂಪಿಸಲಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ್ ತಿಳಿಸಿದರು.
ಬುಧವಾರ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಬಿಡುಗಡೆಗೆ ವಿಳಂಬ ಮಾಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ಮಾ.5 ರಂದು ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ 30 ಸಾವಿರ ಗುತ್ತಿಗೆದಾರರು ಬೃಹತ್ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳಿಂದ ಸಭೆ ಕರೆದಿಲ್ಲ. ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಅವರು ಅರ್ಧಗಂಟೆ ಸಭೆ ನಡೆಸಿದರೆ ನಮ್ಮ ಬಹುತೇಕ ಸಮಸ್ಯೆಗಳು ಇತ್ಯರ್ಥವಾಗುತ್ತವೆ. ಮುಖ್ಯಕಾರ್ಯದರ್ಶಿ, ಸಚಿವರಿಗೆ ಪತ್ರ ಬರೆದರೂ ಪ್ರಯೋಜನವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕೋಯೋಗಿ ಇಲಾಖೆ ಸಚಿವರು ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸುತ್ತಾರೆ. ನೀರಾವರಿ ಇಲಾಖೆ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ನೀರಾವರಿ ಇಲಾಖೆಗೆ ಅಷ್ಟು ಆಸಕ್ತಿ ತೋರುತ್ತಿಲ್ಲ. ಈ ಸರ್ಕಾರದಿಂದ ನಯಾಪೈಸೆ ಅನುಕೂಲವಾಗುತ್ತಿಲ್ಲ ಎಂದು ಹೇಳಿದರು.
ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಹೆಚ್ಚಿನ ಹಣವನ್ನು ಕೇಳುತ್ತಿದ್ದಾರೆ. ಈ ಸರ್ಕಾರದಲ್ಲಿ ಮಧ್ಯವರ್ತಿಗಳು ಹೆಚ್ಚಿದ್ದಾರೆ. ಹಿಂದಿನಂತೆ ಎಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು ನಾವು ಹೇಳುವುದಿಲ್ಲ. ಇದರಿಂದ ಒಂದೂವರೆ ಲಕ್ಷ ಗುತ್ತಿಗೆದಾರರಿಗೆ ತೊಂದರೆಯಾಗಲಿದೆ ಎಂದು ಹೇಳಿದರು.
ಹಳೆಯದು ಮತ್ತು ಹೊಸ ಬಿಲ್ಗಳು ಸೇರಿ 2021 ರಿಂದ 37 ಸಾವಿರ ಕೋಟಿ ಬಾಕಿ ಇದೆ. ಉದಾಃಗೆ ಮೈಸೂರಿನ ಗುತ್ತಿಗೆದಾರರಿಗೆ 14 ಕೋಟಿ ರೂ. ಹಣ ಬಾಕಿ ಇದೆ. ಸಾಲಸೋಲ ಮಾಡಿ ಕೆಲಸ ಮಾಡಿದ್ದು, ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಬಾಕಿ ಹಣ ಬಿಡುಗಡೆ ಮಾಡದಿರುವುದರಿಂದ ಗುತ್ತಿಗೆದಾರರು ತುಂಬಾ ಒತ್ತಡದಲ್ಲಿದ್ದಾರೆ. ಸರ್ಕಾರದ ಬಳಿ ಹಣವಿಲ್ಲದೇ ಇರುವುದರಿಂದಲೇ ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಯಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಪ್ಯಾಕೇಜ್ ಮಾಡುವುದಿಲ್ಲ ಎಂದು ಹೇಳಿದ್ದರು. ಈಗ ಪ್ಯಾಕೇಜ್ ಮಾಡುತ್ತಿದ್ದಾರೆ. 10 ಜಿಲ್ಲೆ ಸೇರಿ ಒಬ್ಬರಿಗೆ ಗುತ್ತಿಗೆ ನೀಡುತ್ತಾರೆ. ನಮ್ಮ ಸರ್ಕಾರ ಬಂದರೆ ಒಂದು ರೂಪಾಯಿ ದುಡ್ಡು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ, ಪರಿಸ್ಥಿತಿ ವಿಪರ್ಯಾಸವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸುರೇಶ್, ರಾಜ್ಯ ಉಪಾಧ್ಯಕ್ಷರಾದ ಗುರು ಸಿದ್ದಪ್ಪ, ಕೃಷ್ಣೆಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರವಿ, ರಾಜ್ಯ ಖಜಾಂಚಿ ನಾಗರಾಜು ಮತ್ತಿತರರು ಹಾಜರಿದ್ದರು.