×
Ad

ಮೈಸೂರು ನಗರ ಪೊಲೀಸರ ಕಾರ್ಯಾಚರಣೆ | 105 ಕಳವು ಪ್ರಕರಣ ಪತ್ತೆ: 2.96 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

Update: 2026-02-26 00:15 IST

ಮೈಸೂರು: ಮೈಸೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳೆದ ಆರು ತಿಂಗಳಲ್ಲಿ ನಡೆದ 105 ಕಳವು ಪ್ರಕರಣ ಪತ್ತೆಹಚ್ಚಿದ್ದು,  2.96 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್, ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಒಂದು ದರೋಡೆ, ಒಂದು ದರೋಡೆಗೆ ಸಂಚು, ನಾಲ್ಕು ಸುಲಿಗೆ, 2 ಸರಗಳ್ಳತನ, 26 ಕನ್ನ ಕಳುವು, 1 ಅರಣ್ಯ ಕಾಯ್ದೆಯ ಪ್ರಕರಣದಿಂದ 2.92 ಕೋಟಿ ರೂ. ಮೌಲ್ಯದ 2.54 ಕೆಜಿ ಚಿನ್ನ, 5.312 ಕೆಜಿ ಬೆಳ್ಳಿ, 49 ದ್ವಿಚಕ್ರ ವಾಹನ, 3 ಕಾರು, 1 ಥಾರ್‌ ಜೀಪ್‌, 2 ಲಾರಿ, 1 ಗೂಡ್ಸ್‌ ವಾಹನ, 1 ಆಟೋ ರಿಕ್ಷಾ, 10.03 ಲಕ್ಷ ರೂ. ನಗದು, 33 ಕೆಜಿ ಗಂಧದ ಮರದ ತುಂಡು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದರು.

ಸರಸ್ವತಿಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ 8 ಕನ್ನ ಕಳವು ಪ್ರಕರಣ ಪತ್ತೆ ಹಚ್ಚಲಾಗಿದೆ. ಈ ಪೈಕಿ ಸೈಯದ್‌ ಅಲೀಂ ಎಂಬಾತನ ವಿರುದ್ಧ ರಾಜ್ಯದ ಮತ್ತು ಹೊರ ರಾಜ್ಯದ ವಿವಿಧೆಡೆ 69 ಪ್ರಕರಣ ದಾಖಲಾಗಿದ್ದು, 2013 ರಿಂದ ಈಚೆಗೆ ಕಳವು ಕೃತ್ಯದಲ್ಲಿ ತೊಡಗಿದ್ದಾನೆ ಎಂದರು.

ಚಾಮರಾಜನಗರ ಮೂಲಕ ಕಳ್ಳ ಮಂಜ ಎಂಬಾತ ಕೇವಲ ದೇವಸ್ಥಾನಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದ. ಆತನ ವಿರುದ್ಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ಕುವೆಂಪುನಗರ ರಾಘವೇಂದ್ರಸ್ವಾಮಿ ಮಠ ಸೇರಿದಂತೆ ಎರಡು ದೇವಾಲಯಗಳಲ್ಲಿ ಕಳ್ಳತನ ಮಾಡಿದ್ದ, ಹುಂಡಿ, ದೇವರ ತಾಳಿ ಮತ್ತಿತರ ಆಭರಣಗಳನ್ನು ಕಳವು ಮಾಡಿದ್ದಾಗಿ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ಅವರು ವಿವರಿಸಿದರು.

ಪಾಲಿಟೆಕ್ನಿಕ್‌ ಒಂದರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಲ್ಯಾಬ್‌ ಟೆಕ್ನಿಷಿಯನ್‌ ಹಾಗೂ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತಮ್ಮ ಮನೆಯ ಸಮೀಪದ ವಿಧವೆಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರು ಮನೆಯಲ್ಲಿ ಇಲ್ಲದ ವೇಳೆ ಕಿಟಕಿ ಮುರಿದು ಕಳವು ಮಾಡಿದ್ದ. ಈತನಿಂದ 25.08 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಉಳಿದಂತೆ ಮೇಟಗಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 17 ಆರೋಪಿಗಳು, ವಿಜನಯಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆರು ಮಂದಿ, ಮಂಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹನ್ನೊಂದು ಮಂದಿ ಮತ್ತು ನರಸಿಂಹರಾಜ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 9 ಮಂದಿ ಆರೋಪಿಗಳನ್ನು ಬಂಧಿಸಿ, ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ಫೆ. 24 ರಂದು ಉದಯಗಿರಿ ಪೊಲೀಸರು ರಾಜೀವನಗರ 2ನೇ ಹಂತದ ವರುಣ್‌ ಎಂಬಾತನನ್ನು ಬಂಧಿಸಿ ಆತನಿಂದ 24 ಕೆಜಿ 485 ಗ್ರಾಂ ಗಾಂಜಾ ಅಮಾನತ್ತುಪಡಿಸಿಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 22 ಎನ್‌.ಡಿ.ಪಿ.ಎಸ್‌ ಕಾಯ್ದೆ ಪ್ರಕರಣ ದಾಖಲಿಸಿ, 30,255 ಗ್ರಾಂ ಗಾಂಜಾ ಹಾಗೂ 311,579 ಮಿ.ಗ್ರಾಂ ಸಿಂಥೆಟಿಕ್‌ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ 102 ಸೇವನೆ ಪ್ರಕರಣ ದಾಖಲಿಸಲಾಗಿದೆ. ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಣೆ, ಸಂಗ್ರಹ ನಿಯಂತ್ರಣ ಸಂಬಂಧ 2025-26ನೇ ಸಾಲಿನಲ್ಲಿ 16 ಎನ್‌.ಡಿ.ಪಿ.ಎಸ್‌ ಆರೋಪಿಗಳ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿದೆ ಎಂದರು.

ನಗರದಲ್ಲಿ ರೌಡಿ ಚಟುವಟಿಕೆ ನಿಯಂತ್ರಣದಲ್ಲಿಡುವ ಸಂಬಂಧ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯ ಜನತಾ ಬಡಾವಣೆ ನಿವಾಸಿ ರೌಡಿ ಪಿ. ಗಣೇಶ್ (25)ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧನದ ಆದೇಶ ಹೊರಡಿಸಿರುವುದಾಗಿ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ಅವರು ವಿವರಿಸಿದರು.

ಆಂಧ್ರ ಮೂಲದ ವ್ಯಕ್ತಿಯೊಬ್ಬ ಗೂಗಲ್‌ ಮೂಲಕ ಒಂಟಿ ಮನೆಯನ್ನು ಪತ್ತೆಹಚ್ಚಿ ಅವುಗಳನ್ನೇ ಗುರಿಯಾಗಿಸಿಕೊಂಡು ಒಬ್ಬನೇ ದಾಳಿ ಮಾಡಿ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸೀಮಾ ಲಾಟ್ಕರ್ ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಸುಂದರ್ ರಾಜ್, ಎಸಿಪಿ ರವಿಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News