×
Ad

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಅಭಿವೃದ್ಧಿಗಾಗಿ ಸಾಲ ಮಾಡಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

Update: 2026-03-07 22:24 IST

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮ್ಮನೆ ಸಾಲ ಮಾಡಿಲ್ಲ, ರಾಜ್ಯದ ಅಭಿವೃದ್ಧಿಗಾಗಿ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ರಾಜ್ಯ ಬಜೆಟ್ ಕುರಿತು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರು ಮಂಡಿಸಿರುವ 2026-27 ನೇ ಸಾಲಿನ ಬಜೆಟ್ ದೂರ ದೃಷ್ಟಿ ಇರುವ ಬಜೆಟ್. ಬಡವರು, ಹಿಂದುಳಿದವರು, ದಲಿತರ ಪರವಾಗಿ ಇರುವ ಬಜೆಟ್ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಸಾಲ ಮಾಡಿರೋದೇ ಸಾಧನೆ ಅಂತಾ ಹೇಳ್ತೀರಲ್ಲ. ನಿಮ್ಮ ವಿಶ್ವಗುರು ನರೇಂದ್ರ ಮೋದಿ ಮಾಡಿರೋದೇನು? ಸಿದ್ದರಾಮಯ್ಯ ಅವರು ಮಾಡಿರೋ ಸಾಲ 2.86 ಲಕ್ಷ ಕೋಟಿ. ಆದರೆ 4 ವರ್ಷದಲ್ಲಿ ಬಿಜೆಪಿ ಮಾಡಿದ ಸಾಲ 4 ಲಕ್ಷ 48 ಸಾವಿರ ಕೋಟಿ. ಸಿದ್ದರಾಮಯ್ಯ ಅವರು ಸುಮ್ಮನೆ ಸಾಲ ಮಾಡಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಸಾಲ ಮಾಡಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬಜೆಟ್ ಮಂಡನೆಯಾದರೆ ಅತ್ತ ವಿರೋಧ ಪಕ್ಷದ ನಾಯಕರುಗಳಾದ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಖಾಲಿ ಚೊಂಬು ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಾರೆ. ಅವರು ತೋರಿಸಿರೋ ಚೊಂಬು ಕೇಂದ್ರ ಬಜೆಟ್ ವಿರುದ್ಧ ಎಂದು ಲಕ್ಷ್ಮಣ್ ಟೀಕಿಸಿದರು.

ಮೈಸೂರಿಗೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸುತ್ತಾರಲ್ವಾ? ಈ ಬಾರಿ ಮೈಸೂರಿಗೆ 27 ಯೋಜನೆ ಕೊಟ್ಟಿದ್ದಾರೆ. ತಾಲೂಕುವಾರು 15 ಯೋಜನೆ ಕೊಟ್ಟಿದ್ದಾರೆ. ಜಯದೇವ ಆಸ್ಪತ್ರೆ ಉನ್ನತೀಕರಣಕ್ಕೆ 180 ಕೋಟಿ ರೂ. ಕೊಟ್ಟಿದ್ದಾರೆ ಎಂದರು.

ರಾಜ್ಯಕ್ಕೆ ನಯಾ ಪೈಸೆ ತರುವ ಯೋಗ್ಯತೆ ಬಿಜೆಪಿಯವರಿಗೆ ಇಲ್ಲ. ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ತಲೆ ಬುಡ ಇಲ್ಲದೇ ಮಾತಾಡ್ತಾರೆ.  ವಿರೋಧ ಪಕ್ಷದ ನಾಯಕರನ್ನು ರಾಜ್ಯದ ಜನರು ಜೋಕರ್ ಮಾಡಿಕೊಂಡು ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಬಿ.ಎಂ.ರಾಮು, ಶಿವಣ್ಣ, ಗಿರೀಶ್, ಮಾಧ್ಯಮ ವಕ್ತಾರ ಎಂ.ಮಹೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News