×
Ad

ತಮಿಳುನಾಡಿನಿಂದ ಕಳ್ಳತನವಾಗಿದ್ದ ಕಂಚಿನ ವಿಗ್ರಹವನ್ನು ಮರಳಿಸಲು ಒಪ್ಪಿದ ಬ್ರಿಟಿಷ್ ವಸ್ತುಸಂಗ್ರಹಾಲಯ

Update: 2024-11-29 20:39 IST

PC : X 

ಚೆನ್ನೈ : ತಂಜಾವೂರು ಜಿಲ್ಲೆಯ ಪುರಾತನ ದೇವಸ್ಥಾನದಿಂದ ಕಳ್ಳತನವಾಗಿದ್ದ ತಿರುಮಂಗೈ ಆಳ್ವಾರ್ ಕಂಚಿನ ವಿಗ್ರಹವನ್ನು 1967ರಲ್ಲಿ ಖರೀದಿಸಿದ್ದ ಲಂಡನ್‌ನ ಆಕ್ಸ್‌ಫರ್ಡ್ ವಿವಿಯ ಅಶ್ಮೋಲಿಯನ್ ವಸ್ತು ಸಂಗ್ರಹಾಲಯವು ತಮಿಳುನಾಡು ಸಿಐಡಿ ಪೋಲಿಸರು ಕಳ್ಳ ಸಾಗಾಣಿಕೆಯ ಪುರಾವೆಗಳನ್ನು ಸಲ್ಲಿಸಿದ ಬಳಿಕ ಅದನ್ನು ರಾಜ್ಯಕ್ಕೆ ಮರಳಿಸಲು ಒಪ್ಪಿಕೊಂಡಿದೆ.

ತಮಿಳುನಾಡು ಸಿಐಡಿ ವಿಗ್ರಹ ಘಟಕದೊಂದಿಗೆ ಇತ್ತೀಚಿನ ಸಂವಹನದಲ್ಲಿ ಆಕ್ಸ್‌ಫರ್ಡ್ ವಿವಿಯು ಕೋಟ್ಯಂತರ ರೂ.ಮೌಲ್ಯದ್ದೆನ್ನಲಾಗಿರುವ ವಿಗ್ರಹವನ್ನು ಭಾರತಕ್ಕೆ ಮರಳಿಸಲು ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ ಎಂದು ಪೋಲಿಸರು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲಂಡನ್‌ನಿಂದ ಭಾರತಕ್ಕೆ ವಿಗ್ರಹವನ್ನು ಸಾಗಿಸಲು ಎಲ್ಲ ವೆಚ್ಚಗಳನ್ನು ಭರಿಸುವುದಾಗಿ ಆಕ್ಸ್‌ಫರ್ಡ್ ವಿವಿಯು ತಿಳಿಸಿದ್ದು, ಪೂಜೆಗಾಗಿ ಅದನ್ನು ದೇವಸ್ಥಾನಕ್ಕೆ ಮರಳಿಸುವುದನ್ನು ಖಚಿತಪಡಿಸಿದೆ. ಇದು ಕದ್ದ ವಿಗ್ರಹಗಳನ್ನು ಅವುಗಳ ಮೂಲಸ್ಥಳಕ್ಕೆ ಮರಳಿಸುವ ಪ್ರಯತ್ನಗಳಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿಕೆಯು ತಿಳಿಸಿದೆ.

ಒಂದು ತಿಂಗಳೊಳಗೆ ವಿಗ್ರಹವನ್ನು ತಮಿಳುನಾಡಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಡಿಜಿಪಿ ಶಂಕರ ಜಿವಾಲ್ ತಿಳಿಸಿದ್ದಾರೆ.

ಪ್ರಸ್ತುತ ಅಮೆರಿಕದ ವಸ್ತು ಸಂಗ್ರಹಾಲಯಗಳಲ್ಲಿರುವ ಕಾಳಿಂಗ ನರ್ತ ಕೃಷ್ಣ, ವಿಷ್ಣು ಮತ್ತು ಶ್ರೀದೇವಿ ವಿಗ್ರಹಗಳನ್ನು ಮರಳಿ ತರಲು ಸಿಐಡಿ ವಿಗ್ರಹ ಘಟಕವು ತನ್ನ ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರಿಸಿದೆ ಎಂದು ಹೇಳಿಕೆಯು ತಿಳಿಸಿದೆ. ಈ ವಿಗ್ರಹಗಳನ್ನು ಕುಂಭಕೋಣಂ ಶ್ರೀಸೌಂದರ್‌ ಪೆರುಮಾಳ ದೇವಸ್ಥಾನದಿಂದ ಕಳವು ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News