ಭಾರತದ ಜನಸಂಖ್ಯೆ ಮಹತ್ವಪೂರ್ಣ ಘಟ್ಟದಲ್ಲಿದೆ, ಬಿಕ್ಕಟ್ಟಿನಲ್ಲಲ್ಲ: ಎನ್ಜಿಒ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಅಧಿಕ ಜನಸಂಖ್ಯೆ ಅಥವಾ ಫಲವತ್ತತೆ ಕುಸಿತದ ಕುರಿತು ಭೀತಿಯಿಂದ ಪ್ರೇರಿತ ಚರ್ಚೆಗಳಿಂದ ದೂರವಿರುವಂತೆ ಆಗ್ರಹಿಸಿರುವ ಎನ್ಜಿಒ ಪಾಪ್ಯುಲೇಷನ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ),ಬದಲಿಗೆ ವಿಶೇಷವಾಗಿ ಮಹಿಳೆಯರು,ಯುವಜನರು ಮತ್ತು ವೃದ್ಧರಿಗೆ ಘನತೆ, ಹಕ್ಕುಗಳು ಮತ್ತು ಅವಕಾಶಗಳ ಮೇಲೆ ಕೇಂದ್ರೀಕೃತ ನೀತಿಗಳಿಗೆ ಕರೆ ನೀಡಿದೆ.
ವಿಶ್ವ ಜನಸಂಖ್ಯಾ ದಿನವಾದ ಶುಕ್ರವಾರ ಹೊರಡಿಸಿರುವ ಹೇಳಿಕೆಯಲ್ಲಿ ಪಿಎಫ್ಐ,ಭಾರತದ ಜನಸಂಖ್ಯಾ ಸವಾಲುಗಳು ಸಂಖ್ಯೆಗಳ ಕುರಿತು ಅಲ್ಲ,ಆದರೆ ನ್ಯಾಯ,ಸಮಾನತೆ ಮತ್ತು ಮಾನವ ಸಾಮರ್ಥ್ಯದಲ್ಲಿ ಹೂಡಿಕೆಯ ಕುರಿತಾಗಿವೆ ಎಂದು ಪ್ರತಿಪಾದಿಸಿದೆ.
ಭಾರತೀಯ ಜನಸಂಖ್ಯೆಯು ಬಿಕ್ಕಟ್ಟಲ್ಲ,ಅದು ಮಹತ್ವಪೂರ್ಣ ಘಟ್ಟದಲ್ಲಿದೆ ಎಂದು ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೇಳಿದ ಪಿಎಫ್ಐನ ಕಾರ್ಯಕಾರಿ ನಿರ್ದೇಶಕಿ ಪೂನಂ ಮುತ್ರೇಜಾ ಅವರು,‘‘ನಾವು ‘ಅತಿಯಾದ ಜನಸಂಖ್ಯೆ’ ಮತ್ತು ‘ಜನಸಂಖ್ಯೆ ಕುಸಿತ’ ಭೀತಿಗಳ ನಡುವೆ ಓಲಾಡುತ್ತಿರುವುದನ್ನು ನಿಲ್ಲಿಸಬೇಕು ಮತ್ತು ನಿಜವಾಗಿಯೂ ಮುಖ್ಯವಿಷಯಗಳಾದ ಲಿಂಗ ಸಮಾನತೆ,ಸಂತಾನೋತ್ಪತ್ತಿ ಸ್ವಾಯತ್ತತೆ ಮತ್ತು ಎಲ್ಲರನ್ನೂ ಒಳಗೊಂಡ ಸಾರ್ವಜನಿಕ ಹೂಡಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು ಎಂದರು.