ಭಾರತದ ದಾಳಿಗೆ ಪಾಕಿಸ್ತಾನದ 30 ರಿಂದ 45 ಸೈನಿಕರು ಮೃತ್ಯು : DGMO ರಾಜೀವ್
Credit: X/Ministry of Defence
ಹೊಸದಿಲ್ಲಿ : ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಾರತೀಯ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ 30 ರಿಂದ 45 ಸೈನಿಕರು ಮೃತಪಟ್ಟಿದ್ದಾರೆ ಎಂದು DGMO ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಹೇಳಿದರು.
ದಿಲ್ಲಿಯಲ್ಲಿ ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ, ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಮತ್ತು ಮೇಜರ್ ಜನರಲ್ ಸಂದೀಪ್ ಎಸ್ ಶಾರದಾ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಮೇ 7ರಂದು 9 ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100ಕ್ಕೂ ಅಧಿಕ ಭಯೋತ್ಪಾದಕರು ಹತರಾಗಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ನಡೆಸಿದ ಮಿಲಿಟರಿ ದಾಳಿಗಳು ಭಯೋತ್ಪಾದಕರನ್ನು ಹತ್ಯೆ ಮಾಡುವ ಉದ್ದೇಶವನ್ನು ಹೊಂದಿತ್ತು. ಸಂಘರ್ಷದಲ್ಲಿ ಪಾಕಿಸ್ತಾನ 30 ರಿಂದ 45 ಸೈನಿಕರನ್ನು ಕಳೆದುಕೊಂಡಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಏರ್ ಮಾರ್ಷಲ್ ಎ.ಕೆ. ಭಾರ್ತಿ, ಭಯೋತ್ಪಾದಕ ಶಿಬಿರಗಳನ್ನು ಮಾತ್ರ ನಿಖರವಾಗಿ ಗುರಿಯಾಗಿಸಿಕೊಂಡಿದ್ದೇವೆ ಎಂದು ಹೇಳಿದರು. ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದ ಮೊದಲ ರಾತ್ರಿ ಭಾರತದ ವಾಯು ರಕ್ಷಣಾ ಪಡೆ ಅವುಗಳಲ್ಲಿ ಹೆಚ್ಚಿನದನ್ನು ಯಶಸ್ವಿಯಾಗಿ ತಡೆದು ಪ್ರತಿದಾಳಿ ನಡೆಸಿತು ಎಂದು ಹೇಳಿದರು.