ಬೇಸಿಗೆ ಧಗೆ: ದಕ್ಷಿಣ ಭಾರತದ 42 ಜಲಾಶಯಗಳ ನೀರಿನ ಮಟ್ಟ ತೀವ್ರ ಕುಸಿತ
ಹೊಸದಿಲ್ಲಿ: ತೀವ್ರ ಬಿಸಿಲಿನ ಧಗೆಯಿಂದಾಗಿ ದಕ್ಷಿಣ ಭಾರತದ 42 ಜಲಾಶಯಗಳ ನೀರಿನ ಮಟ್ಟ ತೀವ್ರ ಕುಸಿತ ಕಂಡಿದ್ದು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ನೀರಿನ ಅಭಾವ ಸ್ಥಿತಿ ಮತ್ತಷ್ಟು ಉಲ್ಬಣಿಸಿದೆ.
ಈ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷ ಇದೇ ಅವಧಿಯಲ್ಲಿ ಇದ್ದ ನೀರಿನ ಮಟ್ಟಕ್ಕಿಂತಲೂ ಕಡಿಮೆ ಮಟ್ಟಕ್ಕೆ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಕೇರಳದ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಪ್ರಮಾಣ ಅಧಿಕ ಇದೆ.
ಕೇಂದ್ರ ಜಲ ಆಯೋಗ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಗುರುವಾರ ವೇಳೆಗೆ ಈ ಜಲಾಶಯಗಳ ನೀರಿನ ಪ್ರಮಾಣ 8.8 ಶತಕೋಟಿ ಘನ ಮೀಟರ್ ಗಳಷ್ಟು ಇತ್ತು.
ಕಳೆದ ವರ್ಷ ಇದೇ ವೇಳೆಗೆ ಜಲಾಶಯಗಳ ನೀರಿನ ಮಟ್ಟ ಶೇಕಡ 29ರಷ್ಟಿತ್ತು. ಈ ಅವಧಿಯಲ್ಲಿ ಕಳೆದ ಹತ್ತು ವರ್ಷಗಳ ಸರಾಸರಿ ಜಲಮಟ್ಟ ಶೇಕಡ 23ರಷ್ಟಿದೆ.
"ಹೀಗೆ ಜಲಾಶಯಗಳ ನೀರಿನ ಮಟ್ಟ ಈ ವರ್ಷಹಿಂದಿನ ವರ್ಷದ ಇದೇ ಅವಧಿಗಿಂತ ಕಡಿಮೆ ಇದ್ದು, ಹತ್ತು ವರ್ಷಗಳ ಸರಾಸರಿಗಿಂತಲೂ ಕಡಿಮೆ ಎಂದು 150 ಪ್ರಮುಖ ಜಲಾಶಯಗಳ ಸ್ಥಿತಿಗತಿ ಕುರಿತ ಸಾಪ್ತಾಹಿಕ ವರದಿ ಹೇಳಿದೆ.