ಆಲಮೇಲ: ಉದ್ಘಾಟನೆಗೊಂಡು ತಿಂಗಳಾದರೂ ಬೆಳಗದ ಬೀದಿ ದೀಪಗಳು

Update: 2026-07-23 14:59 IST

ಆಲಮೇಲ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಸೌಂದರ್ಯೀಕರಣದ ಕನಸು ಕನಸಾಗಿಯೇ ಉಳಿದಿದೆ. ಹಿಡಿದಿದೆ. ಸುಮಾರು 20 ಕೋಟಿ ರೂ. ವೆಚ್ಚದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಅಳವಡಿಸಿ ಲೋಕಾರ್ಪಣೆ ಮಾಡಲಾದ ಬೀದಿ ದೀಪಗಳು ತಿಂಗಳು ಕಳೆದರೂ ಬೆಳಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹಾಗೂ ಶಾಸಕ ಅಶೋಕ ಮನಗೂಳಿ ಅವರು ಪಟ್ಟಣದ ಇಂಡಿ ರಸ್ತೆ ಅಗಲೀಕರಣ ಮತ್ತು ನೂತನ ಬೀದಿದೀಪಗಳ ಲೋಕಾರ್ಪಣೆಯನ್ನು ಜಂಟಿಯಾಗಿ ಮಾಡಿದ್ದರು. ಆದರೆ, ಲೋಕಾರ್ಪಣೆಯಾಗಿ ತಿಂಗಳು ಕಳೆದರೂ ಪ್ರವಾಸಿ ಮಂದಿರದಿಂದ ಡಾ. ಹಬ್ಬು ಕಾಂಪ್ಲೆಕ್ಸ್ ವರೆಗಿನ 50ಕ್ಕೂ ಅಧಿಕ ಬೀದಿ ದೀಪಗಳು ಇನ್ನೂ ಬೆಳಗಿಲ್ಲ.

ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಪಂಚಾಯತಿಗೆ ಹಸ್ತಾಂತರವಾಗಿಲ್ಲ, ಹೆಚ್ಚಿನ ಸಾಮರ್ಥ್ಯದ ಹೆಚ್ಚುವರಿ ಟ್ರಾನ್ಸ್ಫಾರ್ಮರ್ ಲಭ್ಯವಿಲ್ಲ ಎಂದು ಆಡಳಿತಾತ್ಮಕ ಹಾಗೂ ತಾಂತ್ರಿಕ ಕಾರಣಗಳನ್ನು ಮುಂದಿಡುತ್ತಿದ್ದಾರೆ. ಹಾಗಿದ್ದಲ್ಲಿ, ಕೇವಲ ಪ್ರದರ್ಶನಕ್ಕಾಗಿ ಉದ್ಘಾಟನೆ ನಡೆದಿತ್ತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ರಸ್ತೆಯಲ್ಲೇ ಮಳೆನೀರು; ಸವಾರರ ಪರದಾಟ ಬೀದಿ ದೀಪಗಳ ಸಮಸ್ಯೆಯೊಂದಿಗೆ ರಸ್ತೆ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಾಗಿದೆ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬಂದಿದೆ. ಮಳೆನೀರು ಸರಾಗವಾಗಿ ಚರಂಡಿಗೆ ಹರಿದುಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ರಸ್ತೆ ಕೆರೆಯಂತಾಗುತ್ತಿದೆ. ರಸ್ತೆಯಲ್ಲಿ ಮಳೆನೀರು ನಿಲ್ಲುತ್ತಿರುವುದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ನಿತ್ಯ ಪರದಾಡುವಂತಾಗಿದೆ.

ಶಾಸಕರ ಶ್ರಮಕ್ಕೆ ಅಧಿಕಾರಿಗಳ ತಣ್ಣೀರು ಆಲಮೇಲ ಪಟ್ಟಣ ತಾಲೂಕು ಕೇಂದ್ರವಾದ ಬಳಿಕ ಶಾಸಕ ಅಶೋಕ ಮನಗೂಳಿ ಅವರು ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿಗಳ ಸಮರ್ಪಕ ನಿರ್ವಹಣೆಗೆ ಗಮನ ನೀಡುತ್ತಿಲ್ಲ ಎಂದು ಶಾಸಕರ ಅಭಿಮಾನಿಗಳು ದೂರಿದ್ದಾರೆ.

ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಶಾಸಕರು ಕ್ರಮ ಕೈಗೊಳ್ಳಬೇಕು. ಬೀದಿ ದೀಪಗಳನ್ನು ಬೆಳಗಿಸುವುದರೊಂದಿಗೆ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೆಚ್ಚುವರಿ ಟಿಸಿ ಅಳವಡಿಕೆಗೆ ಕ್ರಮ

ಇಂಡಿ ರಸ್ತೆಯ ಬೀದಿ ದೀಪಗಳಿಗಾಗಿ ಹೊಸದಾಗಿ ಅಳವಡಿಸಿರುವ ಟ್ರಾನ್ಸ್ಫಾರ್ಮರ್ ಮೇಲೆ ಹೆಚ್ಚಿನ ವಿದ್ಯುತ್ ಭಾರ ಬೀಳುತ್ತಿರುವುದರಿಂದ ರಾತ್ರಿ ವೇಳೆ ದೀಪಗಳು ಬೆಳಗುತ್ತಿಲ್ಲ. ಈ ತಾಂತ್ರಿಕ ಸಮಸ್ಯೆ ನಿವಾರಿಸಲು ಶೀಘ್ರದಲ್ಲೇ ಹೆಚ್ಚಿನ ಸಾಮರ್ಥ್ಯದ ಹೆಚ್ಚುವರಿ ಟ್ರಾನ್ಸ್ಫಾರ್ಮರ್ ಅಳವಡಿಸಿ ಸಮಸ್ಯೆ ಬಗೆಹರಿಸಲಾಗುವುದು.

-ಅರುಣಕುಮಾರ ವಡಗೇರಿ

ಎಇಇ, ಲೋಕೋಪಯೋಗಿ ಇಲಾಖೆ, ಸಿಂದಗಿ

ಪಪಂಗೆ ಇನ್ನೂ ಹಸ್ತಾಂತರವಾಗಿಲ್ಲ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಅಳವಡಿಸಿರುವ ಬೀದಿ ದೀಪಗಳನ್ನು ಪಟ್ಟಣ ಪಂಚಾಯಿತಿಗೆ ಇನ್ನೂ ಅಧಿಕೃತವಾಗಿ ಹಸ್ತಾಂತರಿಸಿಲ್ಲ. ಸದ್ಯ ಅವುಗಳ ಸಂಪೂರ್ಣ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯೇ ನೋಡಿಕೊಳ್ಳುತ್ತಿದೆ.

-ರವಿ ಶಿರಗುಪ್ಪಿ

ಪ್ರಭಾರಿ ಮುಖ್ಯಾಧಿಕಾರಿ, ಆಲಮೇಲ ಪಪಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಬ್ದುಲಘನಿ ಎಂ.ದೇವರಮನಿ

contributor

Similar News